ಪ್ರಯಾಣಿಕರಿಗೆ ಗುಡ್ ನ್ಯೂಸ್: ಯುಗಾದಿ ಹಬ್ಬಕ್ಕೆ ಕೆಎಸ್ ಆರ್ ಟಿಸಿಯಿಂದ ಹೆಚ್ಚುವರಿ ಬಸ್. ಬೆಂಗಳೂರು, ಏಪ್ರಿಲ್ 5, 2024 (..):ಯುಗಾದಿ ಹಬ್ಬಕ್ಕೆ ಕೆಎಸ್ ಆರ್ ಟಿಸಿಯು ಪ್ರಯಾಣಿಕರಿಗೆ ಸಿಹಿಸುದ್ದಿ ನೀಡಿದ್ದು, ವಿವಿಧ ಊರುಗಳಿಗೆ 2000ಕ್ಕೂ ಹೆಚ್ಚು ವಿಶೇಷ ಬಸ್​ಗಳ ವ್ಯವಸ್ಥೆ ಮಾಡಿದೆ. ಏಪ್ರಿಲ್ 9ರಂದು ಮಂಗಳವಾರ ಯುಗಾದಿ ಹಬ್ಬ ಇರಲಿದೆ. ಶನಿವಾರ, ಭಾನುವಾರ ಹೇಗೂ ರಜೆಯಾದ್ದರಿಂದ ಸೋಮವಾರ ಒಂದು ದಿನ ರಜೆ ಮಾಡಿದರೆ 4 ದಿನ ರಜೆ ಸಿಕ್ಕಂತಾಗುತ್ತದೆ. ಹೀಗೆ ಸಾಲು ರಜೆಗಳಿರುವ ಹಿನ್ನೆಲೆ ಊರಿಗೆ ತೆರಳುವವರ ಸಂಖ್ಯೆ ಹೆಚ್ಚಲಿದ್ದು ಹೀಗಾಗಿ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕೆಎಸ್​​ಆರ್​ಟಿಸಿ ಈ ಕ್ರಮಕ್ಕೆ ಮುಂದಾಗಿದೆ. ಕೆಎಸ್‌ಆರ್‌ಟಿಸಿ ಸೇರಿ ನಾಲ್ಕು ನಿಗಮಗಳು ವಿಶೇಷ ಬಸ್‌ ಗಳು ಕಾರ್ಯಾಚರಣೆ ನಡೆಸಲಿವೆ. ಕೆಎಸ್‌ಆರ್‌ಟಿಸಿಯಿಂದ 1,750ಬಸ್, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ 145 ಬಸ್, ಕೆಕೆಆರ್‌ಟಿಸಿಯ 200 ಬಸ್ ಹಾಗೂ ಬಿಎಂಟಿಸಿಯ 180 ವಿಶೇಷ ಬಸ್‌ಗಳು ಸಂಚಾರ ಮಾಡಲಿವೆ. ಒಟ್ಟು ನಾಲ್ಕು ನಿಗಮಗಳಿಂದ 2,275 ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ. ಎಲ್ಲೆಲ್ಲಿ ಸಂಚರಿಸಲಿವೆ ವಿಶೇಷ ಬಸ್​? ನಗರದ ಕೆಂಪೇಗೌಡ ನಿಲ್ದಾಣ, ಸ್ಯಾಟಲೈಟ್ ನಿಲ್ದಾಣ, ಶಾಂತಿನಗರದಿಂದ ವಿಶೇಷ ಬಸ್ ಸೇವೆ ದೊರೆಯಲಿದೆ. ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ, ಶೃಂಗೇರಿ, ಹೊರನಾಡು, ಶಿವಮೊಗ್ಗ, ಮಡಿಕೇರಿ, ದಾವಣಗೆರೆ, ಗೋಕರ್ಣ, ಕೊಲ್ಲೂರು, ಹುಬ್ಬಳ್ಳಿ ಸೇರಿ‌ ಹಲವು ಸ್ಥಳಗಳಿಗೆ ಹೆಚ್ಚುವರಿ ಬಸ್ ಸೇವೆ ದೊರೆಯಲಿದೆ. ನೆರೆರಾಜ್ಯಗಳ ನಗರಗಳಾದ ಹೈದರಾಬಾದ್, ಚೆನ್ನೈ,‌ ಗೋವಾ ಪಣಜಿ, ಶಿರಡಿ, ಎರ್ನಾಕುಲಂಗೆ ವಿಶೇಷ ಬಸ್ ಸೇವೆ ಇರಲಿದೆ. : , , ,