ಮೈಸೂರು ಬಿಜೆಪಿ ಕಚೇರಿಗೆ ಸಚಿವ ಬಿ.ಸಿ ಪಾಟೀಲ್ ಭೇಟಿ : ಡ್ರಗ್ಸ್ ದಂಧೆ ಕುರಿತು ಪ್ರತಿಕ್ರಿಯಿಸಿದ್ದು ಹೀಗೆ… ಮೈಸೂರು, ಸೆಪ್ಟಂಬರ್ 8,2020(..):ಸ್ಯಾಂಡಲ್ ವುಡ್ ನಲ್ಲಿ ಡ್ರಗ್ ಮಾಫಿಯಾ ವಿಚಾರ ಸಂಬಂಧ ಸಿನಿಮಾ ನಟರು, ರಾಜಕಾರಣಿಗಳ ಮಕ್ಕಳು ಯಾರೇ ಭಾಗಿಯಾಗಿದ್ರೂ ತಪ್ಪು. ಇಂತಹ ದುಶ್ಚಟಗಳಲ್ಲಿ ಭಾಗಿಯಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ತಿಳಿಸಿದರು. ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಮೈಸೂರು ಚಾಮರಾಜಪುರಂನಲ್ಲಿರುವ ಬಿಜೆಪಿ ಕಚೇರಿಗೆ ಸಚಿವ ಬಿ.ಸಿ.ಪಾಟೀಲ್ ಭೇಟಿ ನೀಡಿದರು. ಸಚಿವ ಬಿ‌. ಸಿ. ಪಾಟೀಲ್ ಗೆ ಸ್ಥಳೀಯ ಬಿಜೆಪಿ ನಾಯಕರು ಸ್ವಾಗತ ಕೋರಿದರು. ನಂತರ ಸಚಿವ ಬಿಸಿ ಪಾಟೀಲ್ ಕಾರ್ಯಕರ್ತರೊಡನೆ ಸಮಾಲೋಚನೆ ನಡೆಸಿದರು. ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಬಿ.ಸಿ ಪಾಟೀಲ್, ನಾನು ಸುಮಾರು 20 ವರ್ಷಗಳು ಸಿನಿಮಾನರಂಗದಲ್ಲಿದ್ದೆ. ನಾನು ಈ ರೀತಿಯ ಮಾಫಿಯಾ ಬಗ್ಗೆ ಕೇಳಿರಲಿಲ್ಲ. ಈಗ ಡ್ರಗ್ಸ್ ಎಂಬುದು ಸಿನಿಮಾರಂಗಕ್ಕೆ ಬಂದಿರೋದು ದುರಾದೃಷ್ಠಕರ‌. ಸಿನಿಮಾದವರು ಸೆಲೆಬ್ರಿಟಿಗಳು ಆದ ಕಾರಣ ಜಾಸ್ತಿ ಪ್ರಚಾರ ಸಿಗ್ತಿದೆ. ನಾವೆಲ್ಲ ಗಾಜಿನ ಮನೆಯಲ್ಲಿರುವವರು ನಮ್ಮನ್ನ ಇಡೀ ಜಗತ್ತು ನೋಡುತ್ತೆ. ಸಿನಿಮಾ ನಟರಿಗೆ ಅಭಿಮಾನಿಗಳಿರುತ್ತಾರೆ ಅವರ ಏನೇ ಮಾಡಿದ್ರು ಅದನ್ನು ಅನುಸರಿಸುತ್ತಾರೆ. ಸಿನಿಮಾದವರೇ ಈ ರೀತಿ ಮಾಡಿದ್ರೆ ಅದು ಅಭಿಮಾನಿಗಳ ಮೇಲೆ ಪರಿಣಾಮ ಬೀರುತ್ತೆ. ಹೀಗಾಗಿ ಸಿನಿಮಾರಂಗ ಸಮಾಜಕ್ಕೆ ಮಾದರಿಯಾಗಬೇಕೆ ಹೊರತು ಅವಮಾನವಾಗಬಾರದು ಎಂದು ನುಡಿದರು. : - - – - --