ಮುಂದಿನ ಬಾರಿ ಜಿಲ್ಲೆಯಿಂದ ಮೂವರು ಬಿಜೆಪಿ‌ ಶಾಸಕರಾಗಲಿದ್ದಾರೆ- ಸಚಿವ ಡಾ.ಕೆ.ಸುಧಾಕರ್ ವಿಶ್ವಾಸ…. ಚಿಕ್ಕಬಳ್ಳಾಪುರ,ಸೆಪ್ಟಂಬರ್,4,2020(..): ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಕನಿಷ್ಠ ಮೂವರನ್ನು ಬಿಜೆಪಿ ಶಾಸಕರನ್ನಾಗಿ ಕರೆದುಕೊಂಡು ಹೋಗುವೆ.‌ ಅದಕ್ಕೆ ಪಕ್ಷದ ಕಾರ್ಯಕರ್ತರು ಈಗಿನಿಂದಲೇ ಅಡಿಪಾಯ ಭದ್ರ ಮಾಡುವತ್ತ ಶ್ರಮಿಸಿ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಕರೆಕೊಟ್ಟರು. ಗೌರಿಬಿದನೂರಿನ ಸುಮಂಗಳಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ ಬಿಜೆಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಸಚಿವ ಸುಧಾಕರ್ ಪಾಲ್ಗೊಂಡು ಮಾತನಾಡಿದರು. ಗೌರಿಬಿದನೂರಿನಲ್ಲಿ ಬಿಜೆಪಿ ಬಲಿಷ್ಠವಾಗಿದೆ. ಆದರೆ ಬೂತ್ ಮಟ್ಟದಿಂದ ಪಕ್ಷ ಕಾರ್ಯಕರ್ತರನ್ನು ಇನ್ನಷ್ಟು ಬಲಗೊಳಿಸಬೇಕು.‌ಪಕ್ಷವನ್ನು‌ ಕಟ್ಟುವ ಅಚಲ ವಿಶ್ವಾಸ ಇದ್ದರೆ ಅಭ್ಯರ್ಥಿ ಗೆಲ್ಲುವುದರಲ್ಲಿ ಅನುಮಾನವಿಲ್ಲ. ಇಡೀ ಜಿಲ್ಲೆಯಲ್ಲಿ ನಾನೊಬ್ಬನೇ ಬಿಜೆಪಿ ಶಾಸಕನಿದ್ದೇನೆ. ಈ ಜಿಲ್ಲೆಯಿಂದ ಕನಿಷ್ಠ ಮೂರು ಶಾಸಕರನ್ನು ಕರೆದುಕೊಂಡು ಹೋಗುವ ಛಲದಿಂದ ಎಲ್ಲರೂ ಒಟ್ಟಿಗೆ ಕೆಲಸ‌ ಮಾಡಬೇಕು. ಗ್ರಾಮ ಪಂಚಾಯತಿ ಚುನಾವಣೆ ಸಮೀಪಿಸುತ್ತಿದೆ. ಗೌರಿಬಿದನೂರಿನಲ್ಲಿರುವ 37 ಸ್ಥಾನದಲ್ಲಿ 20 ಸ್ಥಾನವನ್ನು ಬಿಜೆಪಿಗೆ ಗೆಲ್ಲಿಸಿಕೊಡುವ ಶಪಥ ಮಾಡಬೇಕು ಎಂದು ಸಚಿವ ಸುಧಾಕರ್ ಹೇಳಿದರು. ಪಕ್ಷದ ಬುನಾದಿ‌ ಎಂದರೆ ಗ್ರಾಮ ಪಂಚಾಯಿತಿ. ಯಾರು ಎಷ್ಟೇ ಹಣ ಖರ್ಚು ಮಾಡಿದರೂ ನೀವು ಆತಂಕ ಪಡಬೇಡಿ, ಹಣವೇ ಪ್ರಧಾನ ಆಗಿದ್ದರೆ ಮೋದಿ ಪ್ರಧಾನಿ ಆಗಲು ಸಾಧ್ಯವಿತ್ತಾ?. ನಮ್ಮ ಪಕ್ಷಕ್ಕೆ ನಿರ್ದಿಷ್ಟ ಆಲೋಚನೆ ಇದೆ. ನಿರ್ದಿಷ್ಟ ಗುರಿ ಇದೆ ಎಂದರು. ಹಗರಣ ರಹಿತ ಆಡಳಿತ ನೀಡಿದ ಪ್ರಧಾನಿ ಮೋದಿ.. ಮೋದಿ ಅವರ ವಿರುದ್ಧ ಸಣ್ಣ ಹಗರಣ ತೋರಿಸಲು ಯಾರಿಂದಲೂ ಸಾಧ್ಯವಾಗಿಲ್ಲ, ಇದಕ್ಕಿಂತ‌ ಆಡಳಿತ ಬೇಕೆ..? ಅಮೆರಿಕಾದಲ್ಲಿ ಆರೋಗ್ಯ ವ್ಯವಸ್ಥೆ ಅತ್ಯುತ್ತಮವಾಗಿದ್ದರೂ ಕೋವಿಡ್‌ನಿಂದ ಲಕ್ಷಾಂತರ ಜನ‌ ಸಾವನ್ನಪ್ಪಿದ್ದಾರೆ. ಆದರೆ ನಮ್ಮಲ್ಲಿ ಸಾವಿನ ಪ್ರಮಾಣ ಕಡಿಮೆ‌ ಇದೆ. ಮೋದಿ ಕೋವಿಡ್ ನಿಯಂತ್ರಿಸಲು ಯಶಸ್ವಿಯಾಗಿದ್ದಾರೆ ಎಂದು ಸಚಿವ ಸುಧಾಕರ್ ತಿಳಿಸಿದರು. ರಾಜ್ಯದಲ್ಲೂ ಸಹ ಕೋವಿಡ್ ನಿಯಂತ್ರಣ ಶಕ್ತವಾಗಿ ಮಾಡಿದ್ದೇವೆ. ಬಿಜೆಪಿಯ ಎಲ್ಲಾ ಕಾರ್ಯಕರ್ತರು ಮನೆ ಮನೆಗೂ ತೆರಳಿ ಜನರ ಕೋವಿಡ್‌ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಇದಕ್ಕಾಗಿ ಬೂತ್‌ ಮಟ್ಟದಲ್ಲಿ ಟಾಸ್ಕ್‌ ಫೋರ್ಸ್ ರಚಿಸಬೇಕು. ಮತಯಾಚನೆಗಾಗಿ‌ ಮಾತ್ರ ಮನೆ ಮನೆಗೆ ಹೋಗುವುದಕ್ಕಿಂತ ಜನರ ಆರೋಗ್ಯ ಕಾಪಾಡಿಕೊಳ್ಳುವಂತೆ ಮನೆಮನೆಗೂ ತೆರಳಿದರೆ ಚುನಾವಣೆ ಸಂದರ್ಭದಲ್ಲಿ ಜನರೇ ನಮ್ಮ ಬಳಿ ಬರುತ್ತಾರೆ‌ ಎಂದರು. ಎರಡೂವರೆ ವರ್ಷದಲ್ಲಿ ಎತ್ತಿನಹೊಳೆ ನೀರು ಲಭ್ಯ… ಗೌರಿಬಿದನೂರು ತಾಲ್ಲೂಕಿಗೆ ಎರಡೂವರೆ ವರ್ಷದೊಳಗೆ ಎತ್ತಿನಹೊಳೆ ನೀರು ಹರಿಸಲಾಗುವುದು. ಈಗಾಗಲೇ ಕಾಮಗಾರಿಗೆ ಚುರುಕು ನೀಡುವಂತೆ ಸೂಚನೆ ನೀಡಲಾಗಿದೆ. ಮುಂದಿನ ವಾರ ಈ ಬಗ್ಗೆ ಸಭೆ ನಡೆಸಲಾಗುವುದು ಎಂದು ಸಚಿವ ಸುಧಾಕರ್ ಹೇಳಿದರು. ಇನ್ನು ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರಕಾರ ಪ್ರತ್ಯೇಕ‌ ಡಿಸಿಸಿ ಬ್ಯಾಂಕ್ ಹಾಗೂ ಹಾಲು ಒಕ್ಕೂಟದ ಅವಶ್ಯಕತೆ ಇದೆ. ಇದು ಸಹ ಶೀಘ್ರವೇ ಆಗಲಿದೆ ಎಂದು ಹೇಳಿದರು. : - –- - - . -.