ಕೊಳವೆ ಬಾವಿಗೆ ಬಿದ್ದ ಮಗು: ಕಾರ್ಯಾಚರಣೆ ಮುಂದುವರಿಕೆ. ವಿಜಯಪುರ,ಏಪ್ರಿಲ್,4, 2024 (..): ಎರಡು ವರ್ಷದ ಮಗು ತೆರೆದ ಕೊಳವೆ ಬಾವಿಗೆ ಬಿದ್ದಿರುವ ಘಟನೆ ನಿನ್ನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ನಡೆದಿದ್ದು ಮಗುವನ್ನು ರಕ್ಷಿಸಲು ಎನ್ ಡಿಆರ್ ಎಫ್ ಮತ್ತು ಎಸ್ ಡಿಆರ್ ಎಫ್ ಜಂಟಿ ಕಾರ್ಯಾಚರಣೆ ನಡೆಸುತ್ತಿವೆ. ಸತೀಶ್ ಹಾಗೂ ಪೂಜಾ ದಂಪತಿಯ ಪುತ್ರ ಸಾತ್ವಿಕ್ ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ಆಟವಾಡುತ್ತ ಕೊಳವೆ ಬಾವಿಗೆ ಬಿದ್ದಿದ್ದ. ಕೊಳವೆ ಬಾವಿಗೆ ಬಿದ್ದಿರುವ ಮಗುವಿನ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ , ಕೊಳವೆ ಬಾವಿಗೂ ಸಿಬ್ಬಂದಿ ತೋಡಿದ ಹಳ್ಳಕ್ಕೂ ಇದೀಗ ಸಂಪರ್ಕ ದೊರೆತಿದೆ. ಜೊತೆಗೆ ಕೊಳವೆ ಬಾವಿಯಲ್ಲಿ ಮಗು ಅಳುತ್ತಿರುವ ಶಬ್ಧ ಕೂಡ ಕೇಳಿ ಬರ್ತಿದೆ. ಈ ಮೂಲಕ ಮಗುವಿನ ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತ ತಲುಪಿದೆ. ಆಟವಾಡುವ ಗುಂಗಿನಲ್ಲಿ ತೆರೆದಿದ್ದ ಕೊಳವೆ ಬಾವಿಗೆ ಸಾತ್ವಿಕ್ ಬಿದ್ದಿದ್ದ. ಸತತ 12 ಗಂಟೆಗಳಿಂದ ರಕ್ಷಣಾ ತಂಡ ಕಾರ್ಯಚರಣೆ ನಡೆಸುತ್ತಿದ್ದು ಮಗುವಿನ ಕಾಲುಗಳ ಅಲುಗಾಟ ದೃಶ್ಯದಲ್ಲಿ ಸೆರೆಯಾಗಿದೆ. ಬಾಲಕ ಜೀವಂತವಾಗಿ, ಸುರಕ್ಷಿತವಾಗಿ ಹೊರಬರಲಿ ಎಂದು ಎಲ್ಲರು ಭಗವಂತನಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಈ ಕುರಿತು ಮಾತನಾಡಿರುವ ಸಚಿವ ಎಂ.ಬಿ ಪಾಟೀಲ್, ಬಂಡೆಗಲ್ಲು ಸಿಕ್ಕಿರುವ ಕಾರಣ ಕಾರ್ಯಾಚರಣೆ ವಿಳಂಬವಾಗುತ್ತಿದೆ ಮಗುವಿಗೆ ಆಕ್ಸಿಜನ್ ಪೈಪ್ ಸಪ್ಲೆ ಮಾಡಲಾಗಿದೆ. ಡಿಸಿ ಎಸ್ಪಿ ನನ್ನ ಜೊತೆ ಸಂಪರ್ಕದಲ್ಲಿದ್ದಾರೆ ಎಂದಿದ್ದಾರೆ. : , , ,