ಶೀಘ್ರವೇ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ-ಸಚಿವ ರಮೇಶ್ ಜಾರಕಿಹೊಳಿ‌ ಪೀರನವಾಡಿ, ಆಗಸ್ಟ್, 23, 2020(..): ಸಾರ್ವಜನಿಕ ಗಣೇಶ ಉತ್ಸವದ ವಿನಾಯಕ ಮೂರ್ತಿಗಳ ವಿಸರ್ಜನೆಯ ಬಳಿಕ ಮಹತ್ವದ ಸಭೆ ನಡೆಸಿ ಪೀರನವಾಡಿ ಯಲ್ಲಿ ಸಂಗೊಳ್ಳಿ ರಾಯಣ್ಣ ಮೂರ್ತಿ ಯನ್ನು ಪ್ರತಿಷ್ಠಾಪಿಸಲಾಗುವುದು ಎಂದು ಜಲಸಂಪನ್ಮೂಲ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು. ಸಚಿವರ ಗೃಹ ಕಚೇರಿಯಲ್ಲಿ ನಡೆದ ಕುರುಬರ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರದ ಮೇಲೆ ಭರವಸೆ ಇಡಿ, ಕೊಟ್ಟ ‌ಮಾತಿನಂತೆ ರಾಯಣ್ಣನ ಪ್ರತಿಮೆ ಪ್ರತಿಷ್ಠಾಪನೆಗೆ ಕ್ರಮ ಕೈಗೊಳ್ಳಲಾಗುತ್ತದೆ. ಆಂಗ್ಲರ ವಿರುದ್ಧದ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಾಯಣ್ಣ ನಮಗೆಲ್ಲ ಮಾದರಿ ವ್ಯಕ್ತಿ. ಹಾಗಾಗಿ ವಿವಾದವನ್ನು ಶೀಘ್ರವಾಗಿ ಬಗೆಹರಿಸಿ ಮೂರ್ತಿ ಸ್ಥಾಪಿಸಲಾಗುವುದು ಎಂದು ಹೇಳಿದರು. ಗಣೇಶೋತ್ಸವ ಮತ್ತು ಗಣೇಶ ವಿಸರ್ಜನೆ ನಂತರ ಜಿಲ್ಲಾಡಳಿತ ಮತ್ತು ಇತರೆ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ವಿವಾದಕ್ಕೆ ತೆರೆ ಎಳೆಯಲಾಗುವುದು. ಅಲ್ಲಿಯವರೆಗೆ ಸಹಕಾರ ನೀಡುವಂತೆ ಸಚಿವರು ಮನವಿ ಮಾಡಿದರು. ಸಭೆಯಲ್ಲಿ ಎಂ ಎಲ್ ಸಿ ವಿವೇಕರಾವ್ ಪಾಟೀಲ್ ಮತ್ತು ಕುರುಬರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. : -----