ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ನಿವಾಸಕ್ಕೆ ಮುಸ್ಲೀಂ ಮುಖಂಡರ ಭೇಟಿ: ತಮ್ಮ ಸಮುದಾಯದಿಂದಲೇ ಮನೆ ಕಟ್ಟಿಸಿಕೊಡುವ ಭರವಸೆ… ಬೆಂಗಳೂರು,ಆ,14,2020(..): ಡಿ.ಜೆ ಹಳ್ಳಿ, ಕೆ.ಜಿ ಹಳ್ಳಿ ಗಲಭೆ ಪ್ರಕರಣ ಸಂಬಂಧ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರ ನಿವಾಸಕ್ಕೆ ಮುಸ್ಲಿಂ ಮುಖಂಡರು ಹಾಗೂ ಧರ್ಮ ಗುರುಗಳು ಭೇಟಿ ನೀಡಿ ಆತ್ಮಸ್ಥೈರ್ಯ ತುಂಬಿದರು. ಡಿ.ಜೆ ಹಳ್ಳಿ ಹಾಗೂ ಕೆ.ಜಿ ಹಳ್ಳಿಯಲ್ಲಿ ನಡೆದ ಗಲಭೆ ವೇಳೆ ಹಾನಿಗೊಳಗಾದ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆಗೆ ಶಾಸಕ ಜಮೀರ್ ಅಹಮದ್ ಖಾನ್, ಮುಸ್ಲೀಂ ಮುಖಂಡರಾದ ಮೌಲಾನಾ ಮುಸ್ತಫಾ ರಿಫಾಯಿ, ಮುಸ್ಲಿಂ ಧರ್ಮ ಗುರುಗಳು ಮೌಲನಾ ಸಹೀರ್ ಅಹ್ಮದ್ ಖಾನ್ ಹಾಗೂ ಮುಖಂಡರುಗಳು ಭೇಟಿ ನೀಡಿ ಚರ್ಚಿಸಿದರು. ಬಳಿಕ ಮಾತನಾಡಿದ ಮುಸ್ಲಿಂ ಧರ್ಮ ಗುರು ಮೌಲನಾ ಸಹೀರ್ ಅಹ್ಮದ್ ಖಾನ್, ಈ ರೀತಿ ಘಟನೆ ಆಗಬಾರದಿತ್ತು. ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಜತೆ ನಾವು ಇದ್ದೇವೆ. ನಾವು ಶಾಸಕರ ಬಳಿ ಕ್ಷಮೆ ಕೇಳುತ್ತೇವೆ. ಶಾಸಕರು ಒಪ್ಪಿದರೇ ನಮ್ಮ ಸಮುದಾಯದಿಂದಲೇ ಅವರಿಗೆ ಮನೆ ಕಟ್ಟಿಸಿಕೊಡುತ್ತೇವೆ ಎಂದು ತಿಳಿಸಿದರು. ನಂತರ ಮಾತನಾಡಿದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ, ಧರ್ಮಗುರುವಿಗೆ ನನ್ನ ಅಭಿನಂದನೆಗಳು. ನಮ್ಮ ನೋವಿನ ಜತೆ ಇರುವುದಾಗಿ ಅವರು ಹೇಳಿದ್ದಾರೆ. ಕಿಡಿಗೇಡಿಗಳಿಂದ ಈ ಘಟನೆ ನಡೆದಿದೆ. ಹೀಗಾಗಿ ಎಲ್ಲರನ್ನೂ ದ್ವೇಷಿಸುವುದು ತಪ್ಪು. ನಮ್ಮ ರಾಜ್ಯದಲ್ಲಿ ಶಾಂತಿಯುತರಾಗಿರಬೇಕು. ನಾನೇ ಮನೆಯನ್ನ ಕಟ್ಟಿಸಿಕೊಳ್ಳುತ್ತೇನೆ ಎಂದು ನುಡಿದರು. : - – –-