ಗಲಭೆ ಮಾಡಿದ್ದು ಯಾರೋ..? ಬಲಿಯಾದವರು ಇನ್ಯಾರೋ…?- ಶಾಸಕ ಜಮೀರ್ ಅಹ್ಮದ್ ಖಾನ್ ಬೆಂಗಳೂರು,ಆ,13,2020(..): ಬೆಂಗಳೂರಿನ ಡಿ.ಜೆ ಹಳ್ಳಿ, ಕೆಜಿ ಹಳ್ಳಿ ಕಾವಲ್ ಭೈರಸಂದ್ರ ಗಲಭೆ ವೇಳೆ ಪೊಲೀಸರ ನಡೆಸಿದ ಗೋಲಿಬಾರ್ ಗೆ ಮೃತಪಟ್ಟ ಯುವಕರು ಅಮಾಯಕರು ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಶಾಸಕ ಜಮೀರ್ ಅಹ್ಮದ್ ಖಾನ್, ಗೋಲಿಬಾರ್‌ನಿಂದ ಮೃತಪಟ್ಟ ಯುವಕರ ಮನೆಗೆ ನಿನ್ನೆ ಭೇಟಿ ನೀಡಿದ್ದೆ, ನಿಜಕ್ಕೂ ಅವರ ಕುಟುಂಬಗಳ ಪರಿಸ್ಥಿತಿ ಕಂಡು ಕಣ್ಣೀರು ಬಂತು. ಇದ್ದ ಒಬ್ಬ ಮಗನನ್ನು ಕಳೆದುಕೊಂಡ ತಾಯಿ, ತಂಗಿಗೆ ಯಾರು ದಿಕ್ಕು? ಯಾರೋ ಕಿಡಿಗೇಡಿಗಳು ಕಲ್ಲು ತೂರಿ, ಬೆಂಕಿ ಹಚ್ಚಿದರು, ಯಾರೋ ಕಿಡಿಗೇಡಿಗಳು ಕೃತ್ಯವೆಸಗಿದ್ರು. ಗಲಭೆ ಮಾಡಿದ್ದು ಯಾರೋ..? ಆದರೆ ಬಲಿಯಾದವರು ಇನ್ಯಾರೋ ..? ಎಂದು ಹೇಳಿದ್ದಾರೆ. ಹಾಗೆಯೇ ಪ್ರವಾದಿ ಮಹಮ್ಮದ್ ಪೈಗಂಬರರನ್ನು ವ್ಯಕ್ತಿಯೊಬ್ಬ ನಿಂದಿಸಿರುವುದು ವೈಯಕ್ತಿಕವಾಗಿ ನನಗೂ ಸಾಕಷ್ಟು ನೋವಾಗಿದೆ. ನಮ್ಮ ನೋವು, ಆಕ್ರೋಶವನ್ನು ಕಾನೂನು ಹೋರಾಟದ ಮೂಲಕದ ತೋರಿಸಿ, ಕಠಿಣ ಶಿಕ್ಷೆಗೆ ಆಗ್ರಹಿಸಬೇಕೇ ಹೊರತು ಅಶಾಂತಿಯ ಮೂಲಕವಲ್ಲ. ನ್ಯಾಯಕ್ಕಾಗಿ ನಡೆಸುವ ಕಾನೂನು ಹೋರಾಟದಲ್ಲಿ ನಾನೂ ನಿಮ್ಮ ಜೊತೆಗಿರುತ್ತೇನೆ ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ಟ್ವೀಟ್ ಮಾಡಿ ತಿಳಿಸಿದ್ದಾರೆ. : - - --- -