ಪ್ರತ್ಯೇಕ ಅಧ್ಯಯನ ತಂಡ ಮತ್ತು ರಾಜ್ಯಕ್ಕೆ ವಿಶೇಷ ಪ್ಯಾಕೇಜ್ ನೀಡಿ: ರಾಜ್ಯ ಸಚಿವರ ಬೇಡಿಕೆಗೆ ಪ್ರಧಾನಿ ಮೋದಿ ಕೊಟ್ಟ ಭರವಸೆ ಏನು ಗೊತ್ತೆ….? ಬೆಂಗಳೂರು,ಆ,10,2020(..): ರಾಜ್ಯದಲ್ಲಿ ಮಹಾಮಳೆಯಿಂದ ಅಪಾರಪ್ರಮಾಣದ ಹಾನಿ ಹಿನ್ನೆಲೆ ರಾಜ್ಯಕ್ಕೆ ವಿಶೇಷ ಪ್ಯಾಕೇಜ್ ನೀಡಿ ಮತ್ತು ಪ್ರತ್ಯೇಕ ಅಧ್ಯಯನ ತಂಡ ಕಳಿಸಿಕೊಡಿ ಎಂದು ಪ್ರಧಾನಿ ಮೋದಿ ಬಳಿ ರಾಜ್ಯದ ಸಚಿವರು ಮನವಿ ಮಾಡಿದರು. ಕೊಡಗು, ಚಿಕ್ಕಮಗಳೂರು, ಉಡುಪಿ, ಮೈಸೂರು ಸೇರಿ ರಾಜ್ಯದ ಹಲವು ಭಾಗಗಳಲ್ಲಿ ಭಾರಿ ಮಳೆಯಿಂದಾಗಿ ಅಪಾರ ಪ್ರಮಾಣದ ಹಾನಿ ಉಂಟಾಗಿದ್ದು ಈ ಹಿನ್ನೆಲೆ ಇಂದು ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯದ ಸಚಿವರ ಜತೆ ಸಭೆ ಮಾಡಿ ಚರ್ಚಿಸಿದರು. ಸಭೆಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ಕಂದಾಯ ಸಚಿವ ಆರ್.ಅಶೋಕ್ ಭಾಗಿಯಾಗಿದ್ದರು. ಪ್ರಧಾನಿ ಮೋದಿ ಜೊತೆಗಿನ 15 ನಿಮಿಷಗಳ ಸಭೆ ವೇಳೆ, ಮಳೆ ಹಾನಿಗೆ ಪ್ರತ್ಯೇಕ ಪ್ಯಾಕೇಜ್ ನೀಡಿ, ಮಳೆಹಾನಿ ಬಗ್ಗೆ ಅಧ್ಯಯನ ನಡೆಸಲು ಪ್ರತ್ಯೇಕ ತಂಡ ಕಳುಹಿಸಿ ಎಂದು ರಾಜ್ಯದ ಸಚಿವರು ಪ್ರಧಾನಿ ಮೋದಿ ಬಳಿ ಮನವಿ ಮಾಡಿದರು. ಹಾಗೆಯೇ ರಾಜ್ಯಕ್ಕೆ ನಾಲ್ಕು ಎನ್ ಡಿಆರ್ ಎಫ್ ತಂಡ ಕಳುಹಿಸಿ. ಕೃಷ್ಣಾ ನದಿ ತೀರದಲ್ಲಿ ಆಗಿರುವ ಹಾನಿ ಬಗ್ಗೆ ಅಧ್ಯಯನ ತಂಡ ಪ್ರತ್ಯೇಕ ತಂಡ ಕಳುಹಿಸಲು ಮನವಿ ಮಾಡಿದರು. ಸಚಿವರ ಮನವಿ ಆಲಿಸಿದ ಪ್ರಧಾನಿ ಮೋದಿ, ಕೃಷ್ಣನದಿ ಕೊಳ್ಳದ ಪ್ರವಾಹ ಹಾನಿ ಬಗ್ಗೆ ಅಧ್ಯಯನ ನಡೆಸಲು ವಿಶೇಷ ತಂಡ ಕಳಿಸುವುದಾಗಿ ಭರವಸೆ ನೀಡಿದರು. ಕೃಷ್ಣ ನದಿ ಕೊಳ್ಳದ ಪ್ರವಾಹ ಪರಿಸ್ಥಿತಿಯನ್ನು ಅರಿಯಲು ವಿಶೇಷ ಅಧ್ಯಯನ ತಂಡವನ್ನು ಕಳುಹಿಸಿ ಕೊಡಲಾಗುತ್ತದೆ. ಕೃಷ್ಣಾ ನದಿ ಹರಿಯುವಂತ 3 ರಾಜ್ಯಗಳಿಗೆ ಪ್ರವಾಹ ಪರಿಸ್ಥಿತಿಯ ಅವಲೋಕನವನ್ನು ಈ ವಿಶೇಷ ತಂಡದ ಮೂಲಕ ಅಧ್ಯಯನ ನಡೆಸಲಾಗುತ್ತದೆ ಎಂಬುದಾಗಿ ಭರವಸೆ ನೀಡಿದರು. : - - – - – --