ತಮ್ಮ ಲೋಪ ಸರಿಪಡಿಸಿಕೊಳ್ಳಿ: ಅರಣ್ಯ ಇಲಾಖೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ತಾಕೀತು… ಬೆಂಗಳೂರು,ಆ,6,2020(..): ರೈತ ಸಮುದಾಯ ಆರ್ಥಿಕವಾಗಿ ಸಬಲರಾಗುವಲ್ಲಿ ಪ್ರಮುಖಪಾತ್ರ ನಿರ್ವಹಿಸಬೇಕಾದ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮವು ಜನಸ್ನೇಹಿಯಾಗಿ ಕೆಲಸ ನಿರ್ವಸದಿರುವ ಬಗ್ಗೆ ದೂರುಗಳು ಕೇಳಿಬಂದಿದ್ದು, ತಮ್ಮ ಲೋಪದೋಷಗಳನ್ನು ಸರಿಪಡಿಸಿಕೊಳ್ಳುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ ಅವರು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಧು ಶರ್ಮಾ ಅವರಿಗೆ ತಾಕೀತು ಮಾಡಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಇಂದು ನಡೆದ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಕನ್ನಡ ಪ್ರಗತಿ ಪರಿಶೀಲನಾ ಜಾಲತಾಣ ಸಭೆ (ಆನ್ಲೈನ್ ಸಭೆ) ನಡಸಿದರು. ನೇರ ಜನಸಂಪರ್ಕದೊಂದಿಗೆ ವ್ಯವಹರಿಸುವ ಅರಣ್ಯ ಇಲಾಖೆಯು ಈ ನೆಲದ ಭಾಷೆಯನ್ನು ತನ್ನ ಆಡಳಿತದ ಭಾಷೆಯನ್ನಾಗಿ ಸಂಪೂರ್ಣವಾಗಿ ಜಾರಿಗೆ ತರುವ ಜವಾಬ್ದಾರಿ ಹೊಂದಿದೆ ಎಂದರು. ತಮ್ಮ ಇಲಾಖೆಯಿಂದ ರಬ್ಬರ್ ಬೋರ್ಡ್ ಗೆ ಸಂಬಂಧಿಸಿದ ಅಧಿಸೂಚನೆಗಳು ಇಂಗ್ಲೀಷಿನಲ್ಲಿರುವುದನ್ನು ಗಮನಿಸಲಾಗಿದೆ. ಈ ಸಂಬಂಧ ಕಾರಣ ಕೇಳಿ ನೋಟೀಸನ್ನು ತಮಗೆ ನೀಡಲಾಗಿದೆ. ಇದನ್ನು ಕೂಡಲೇ ಸರಿಪಡಿಸಿಕೊಂಡು ಪ್ರಾಧಿಕಾರಕ್ಕೆ ವರದಿ ನೀಡುವಂತೆ ಟಿ.ಎಸ್ ನಾಗಾಭರಣ ಸೂಚಿಸಿದರು. ಅರಣ್ಯ ನಿಗಮಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆಯನ್ನು ತಾವು ಒಂದು ಬಿಳಿ ಹಾಳೆಯಲ್ಲಿ ಆಂಗ್ಲಭಾಷೆಯಲ್ಲಿ ಬರೆದು ಸಹಿ ಮಾಡಿ ಕೊಟ್ಟಿರುವುದು ಕ್ರಮವಲ್ಲ. ನೀವೇ ನೋಡಿ ಇದು ನಿಮ್ಮದೇ ಸಹಿ ತಾನೆ ಎಂದು ಸಭೆಯಲ್ಲಿ ಪ್ರದರ್ಶಿಸಿದರು. ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತಕ್ಕೆ ಸಂಬಂಧಿಸಿದ ಜಾಲತಾಣಗಳು ಆಂಗ್ಲಭಾಷೆಯಲ್ಲಿವೆ. ಅದರ ಎಲ್ಲ ಕೊಂಡಿಗಳೂ ಸಹ ಇಂಗ್ಲಿಷಿನಲ್ಲಿದ್ದು, ಇದು ರಾಜ್ಯ ಸರ್ಕಾರದ ಭಾಷಾನೀತಿಯ ಉಲ್ಲಂಘನೆಯಾಗುತ್ತದೆ. ಆದ್ದರಿಂದ ಕೂಡಲೇ ಮಾದರಿ ಜಾಲತಾಣವನ್ನಾಗಿ ಒಂದು ತಿಂಗಳೊಳಗೆ ಪರಿವರ್ತಿಸದಿದ್ದಲ್ಲಿ ಕ್ರಮಕೈಗೊಳ್ಳುವುದಾಗಿ ಹೇಳಿದರು. ಮಾನ್ಯ ಮುಖ್ಯಮಂತ್ರಿಗಳ ಇ-ಆಡಳಿತ ಸಲಹೆಗಾರರಾದ ಬೇಳೂರು ಸುದರ್ಶನ, ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಧು ಶರ್ಮಾ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ.ಮುರಳಿಧರ, ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಡಾ.ವೀರಶೆಟ್ಟಿ ಮತ್ತು ಡಾ.ಎ. ಸತ್ಯನಾರಾಯಣ ಮತ್ತಿತರೆ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. : - – - .