ಕಬಿನಿ ಡ್ಯಾನಿಂದ 40 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ: ಪ್ರವಾಹ ಭೀತಿಯಲ್ಲಿ ನಂಜನಗೂಡು…? ಮೈಸೂರು,ಆ,5,2020(..): ಕಬಿನಿ ಜಲಾನಯದ ಹಿನ್ನೀರಿನ ಪ್ರದೇಶದಲ್ಲಿ ಮಳೆರಾಯನ ಅಬ್ಬರ ಮುಂದುವರೆದಿದ್ದು ಈ ನಡುವೆ ಕಬಿನಿ ಡ್ಯಾನಿಂದ 40ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಲಾಗಿದೆ. ನೀರು ಬಿಡುಗಡೆ ಹಿನ್ನೆಲೆ ದಕ್ಷಿಣ ಕಾಶಿ ನಂಜನಗೂಡಿಗೆ ಪ್ರವಾಹ ಭೀತಿ ಎದುರಾಗಲಿದೆ. ಇನ್ನು ಕಪಿಲಾನದಿಯಲ್ಲಿರುವ ಹದಿನಾರು ಕಾಲು ಮಂಟಪ ಬಹುತೇಕ ಮುಳುಗಡೆಯಾಗಿದೆ. ಮತ್ತಷ್ಟು ನೀರು ಬಿಟ್ಟರೆ ಮೂರು ಸೇತುವೆಗಳು ಮುಳುಗಡೆಯಾಗಲಿವೆ. ಅಯ್ಯಪ್ಪಸ್ವಾಮಿ ದೇವಸ್ಥಾನ, ಪರುಶುರಾಮ ದೇವಸ್ಥಾನ ಕೂಡ ಪ್ರವಾಹ ಭೀತಿಯಲ್ಲಿದ್ದು ನಂಜನಗೂಡಿನ ಹಳ್ಳದಕೇರಿ, ಮಲ್ಲನಮೂಲೆ ಮಠದಲ್ಲಿದ್ದ ಜನರನ್ನ ಸ್ಥಳಾಂತರ ಮಾಡಲಾಗಿದೆ. ಹಾಗೆಯೇ ಅಲ್ಲಿನ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ನಂಜನಗೂಡು ನಗರಸಭೆ ಆಯುಕ್ತ ಕರಿಬಸವಯ್ಯ ಸೂಚನೆ ನೀಡಿದ್ದಾರೆ. ರಾಜ್ಯದಲ್ಲಿ ಮೊದಲು ತುಂಬುವ ಜಲಾಶಯ ಎಂಬ ಕೀರ್ತಿಗೆ ಪಾತ್ರವಾಗಿರುವ ಕಬಿನಿ ಒಡಲು ಭರ್ತಿಯಾಗಲು ಇನ್ನು ಕೇವಲ ನಾಲ್ಕು ಅಡಿ ಬಾಕಿ ಇದ್ದು, ಮಳೆಯಾಗುತ್ತಿರುವ ಹಿನ್ನೆಲೆ ಜಲಾಶಯದ ಸುರಕ್ಷತೆ ದೃಷ್ಠಿಯಿಂದ 40 ಸಾವಿರ ಕ್ಯೂಸೆಕ್ ನೀರನ್ನ ಹೊರಕ್ಕೆ ಬಿಡಲಾಗಿದೆ. ಒಳಹರಿವು ಹೆಚ್ಚಾದಂತೆಲ್ಲ ಹೊರಹರಿವಿನಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ. ಜಲಾಶಯ 19.52 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದ್ದು ಪ್ರಸ್ತುತ 16.97 ಟಿಎಂಸಿ ನೀರು ಶೇಖರಣೆಯಾಗಿದೆ. ಜಲಾಶಯದ ಗರಿಷ್ಠ ನೀರಿನ ಮಟ್ಟ2284.00 ಅಡಿಗಳು. ಇಂದಿನ ಮಟ್ಟ 2279.90 ಅಡಿಗಳಿದ್ದು ನದಿ ಪಾತ್ರದಲ್ಲಿ ಪ್ರವಾಹ ಭೀತಿ ಎದುರಾಗಿದೆ. : 40 - –- – - -