ಅಸಲಿ ಚಿನ್ನ ತೋರಿಸಿ ನಕಲಿ ಚಿನ್ನ ನೀಡಿ ಲಕ್ಷಾಂತರ ರೂ ವಂಚಿಸಿದ್ದ ಆರೋಪಿಗಳು ಅಂದರ್… ಮೈಸೂರು,ಆ,3,2020(..): ಅಸಲಿ ಚಿನ್ನ ತೋರಿಸಿ ನಕಲಿ ಚಿನ್ನ ನೀಡಿ ಲಕ್ಷಾಂತರ ರೂ. ವಂಚಿಸಿದ್ದ ಖತರ್ನಾಕ್ ಕಳ್ಳರನ್ನ ನಗರದ ಸರಸ್ವತಿಪುರಂ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಭೀಮ್ ಅಲಿಯಾಸ್ ಡೈನಾ ಮತ್ತು ಅರ್ಜುನ್ ಅಲಿಯಾಸ್ ಮಾರ್ವಾಡ ಬಂಧಿತ ಆರೋಪಿಗಳು. ಪೊಲೀಸರು ಬಂಧಿತರಿಂದ 20 ಲಕ್ಷ ಕ್ಯಾಶ್ ಎರಡು ಮೋಟಾರು ಬೈಕ್ ಮತ್ತು ಮೊಬೈಲ್ ಗಳನ್ನ ವಶಕ್ಕೆ ಪಡೆದಿದ್ದಾರೆ. ಪುರಾತನ ಕಾಲದ ಚಿನ್ನದ ನಾಣ್ಯ ಸಂಗ್ರಹಿಸುವ ಹವ್ಯಾಸವುಳ್ಳ ಮೈಸೂರಿನ ಕುಂಬಾರಕೊಪ್ಪಲಿನ ರಾಘವೇಂದ್ರ ಎಂಬುವವರಿಗೆ ಈ ಇಬ್ಬರು ಆರೋಪಿಗಳು ವಂಚನೆ ಮಾಡಿದ್ದರು ಎನ್ನಲಾಗಿದೆ. ರಾಘವೇಂದ್ರ ಅವರಿಗೆ ಬಂಧಿತ ಆರೋಪಿಗಳು ಹಳೆಯ ಚಿನ್ನದ ನಾಣ್ಯ ನೀಡುವುದಾಗಿ ನಂಬಿಸಿ ನಂತರ ನಕಲಿ ಚಿನ್ನದ ಗುಂಡುಗಳನ್ನು ನೀಡಿ 30 ಲಕ್ಷರೂ ವಂಚಿಸಿದ್ದರು. ಒಟ್ಟು ಏಳು ಜನರ ತಂಡದಿಂದ ಈ ಕೃತ್ಯ ನಡೆದಿದೆ. ಉಳಿದ ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದು ಈ ಸಂಬಂಧ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರಿತು ಮಾಹಿತಿ ನೀಡಿದ ಡಿಸಿಪಿ ಡಾ. ಎ.ಎನ್ ಪ್ರಕಾಶ್ ಗೌಡ, ಆರೋಪಿಗಳು ಮತ್ತಷ್ಟು ಪ್ರಕರಣಗಳಲ್ಲಿ ಈ ಭಾಗಿಯಾಗಿರುವ ಶಂಕೆ ಇದೆ. ಹೀಗಾಗಿ ಸಾರ್ವಜನಿಕರು ಎಚ್ಚರಿಕೆಯಿಂದಿರಬೇಕು. ಯಾವುದೇ ಹೊಸ ವ್ಯಕ್ತಿಗಳನ್ನ ಭೇಟಿಯಾದಾಗ ಜಾಗೃತರಾಗಿರಬೇಕು. ಅನುಮಾನ ವ್ಯಕ್ತಿಯಾದಾಗ ಪೊಲೀಸರಿಗೆ ಮಾಹಿತಿ ನೀಡಿ ಎಂದು ಸಲಹೆ ನೀಡಿದ್ದಾರೆ. : - - - –