ನಿಮ್ಮ ನಿಮ್ಮ ವಲಯಗಳಲ್ಲಿ ಆಗುವ ಅನಾಹುತಗಳಿಗೆ ನೀವೇ ಜವಾಬ್ದಾರಿ- ಕೊರೋನಾ ನಿಯಂತ್ರಣ ಕುರಿತ ಸಭೆಯಲ್ಲಿ ಸಿಎಂ ಬಿಎಸ್ ವೈ ವಾರ್ನಿಂಗ್… ಬೆಂಗಳೂರು,ಜು,17,2020(..): ಕೊರೋನಾ ವಿಚಾರದಲ್ಲಿ ನಿಮ್ಮ ನಿಮ್ಮ ವಲಯಗಳಲ್ಲಿ ಆಗುವ ಅನಾಹುತಗಳಿಗೆ ನೀವೇ ಜವಾಬ್ದಾರಿ ಎಂದು ಬೆಂಗಳೂರಿನ 8 ವಲಯಗಳ ಉಸ್ತುವಾರಿಗಳಿಗೆ ಸಿಎಂ ಬಿಎಸ್ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಕೊರೋನಾ ಮಹಾಮಾರಿ ನಿಯಂತ್ರಿಸಲು ಈಗಾಗಲೇ 8 ವಲಯಗಳನ್ನಾಗಿ ವಿಂಗಡಿಸಿ ಒಂದೊಂದು ವಲಯವನ್ನ ಓರ್ವ ಸಚಿವರಿಗೆ ಉಸ್ತುವಾರಿ ನೀಡಲಾಗಿದೆ. ಈ ಮಧ್ಯೆ ಕೊರೋನಾ ಚೈನ್ ಬ್ರೇಕ್ ಮಾಡಲು ಈಗಾಗಲೇ ಒಂದು ವಾರ ಬೆಂಗಳೂರಿನಲ್ಲಿ ಲಾಕ್ ಡೌನ್ ಮಾಡಲಾಗಿದೆ. ಕೊರೋನಾ ನಿಯಂತ್ರಣ ಸಂಬಂಧ ಇಂದು ಸಿಎಂ ಬಿಎಸ್ ಯಡಿಯೂರಪ್ಪ 8 ವಲಯಗಳ ಉಸ್ತುವಾರಿಗಳ ಜತೆ ಸಭೆ ನಡೆಸಿ ಚರ್ಚಿಸಿದರು. ಈ ವೇಳೆ ಸಭೆಯಲ್ಲಿ ವಲಯವಾರು ಮಟ್ಟದಲ್ಲಿ ಅನಾಹುತ ಸಂಭವಿಸಿದರೆ ಅದಕ್ಕೆ ನೀವೇ ಹೊಣೆ ಎಂದು ಎಚ್ಚರಿಕೆ ನೀಡಿದ್ದಾರೆ. ಕೊರೊನಾ ಹಾಟ್ ಸ್ಪಾಟ್ ಹಾಗೂ ಜನಸಂದಣಿ ಇರುವ ಪ್ರದೇಶಗಳಲ್ಲಿ ಹೆಚ್ಚು ಪೊಲೀಸರನ್ನು ನಿಯೋಜಿಸಿ ಕ್ರಮ ಕೈಗೊಳ್ಳಿ. ಕೇವಲ ಲಾಕ್ ಡೌನ್ ನಿಂದ ಕೊರೊನಾ ನಿಯಂತ್ರಿಸಲು ಸಾಧ್ಯವಿಲ್ಲ. ನಾವು ಆರ್ಥಿಕ ಪರಿಸ್ಥಿತಿ ಕುರಿತು ಗಮನ ಹರಿಸಬೇಕಿದೆ. ಹೀಗಾಗಿ ಹಾಟ್ ಸ್ಟಾಟ್ ಇರುವ ಕಡೆ ಮಾತ್ರ ಸೀಲ್ ಡೌನ್ ಮಾಡಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ ಎಂದು ಸಿಎಂ ಬಿಎಸ್ ವೈ ಸೂಚಿಸಿದರು. ನಾಳೆ ಮತ್ತಷ್ಟು ಆ್ಯಂಬುಲೆನ್ಸ್ ಖರೀದಿಸಿ. ಬೆಂಗಳೂರಿನಲ್ಲಿ ಆ್ಯಂಬುಲೆನ್ಸ್ ಕೊರತೆಯಾಗದಂತೆ ನೋಡಿಕೊಳ್ಳಿ. ಆ್ಯಂಬುಲೆನ್ಸ್ ಖರೀದಿಸಿದ ಬಳಿಕ ವಾರ್ಡ್ ವಾರು ಹಂಚಿಕೆ ಮಾಡಿ. ಇನ್ನು ನಿಮ್ಮ ವಲಯಗಳಲ್ಲಿರುವ ಸೋಂಕಿತಕರನ್ನು ಅಲ್ಲಿಯೇ ಇರಿಸಿ, ನಿಮ್ಮ ವಲಯದಲ್ಲೇ ಇರಿಸಿ ಚಿಕಿತ್ಸೆ ನೀಡಿ. ಒಂದು ವೇಳೆ, ನಿಮ್ಮ ವ್ಯಾಪ್ತಿಯಲ್ಲಿ ಸೋಂಕಿತರು ಹೆಚ್ಚಾದರೆ ಅವರಿಗೆ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಿ ಎಂದು ಸೂಚನೆ ನೀಡಿದರು. : - - - -