ಇಂದಿನಿಂದ ಐದು ದಿನಗಳ ಕಾಲ ಭಕ್ತರಿಗಿಲ್ಲ ತಾಯಿ ಚಾಮುಂಡೇಶ್ವರಿ ದರ್ಶನ ಭಾಗ್ಯ… ಮೈಸೂರು,ಜು,10,2020(..): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕರೋನಾ ಅಬ್ಬರ ಹೆಚ್ಚಾಗಿದ್ದು ಈ ಹಿನ್ನೆಲೆ ಇಂದಿನಿಂದ ಐದು ದಿನಗಳ ಕಾಲ ಚಾಮುಂಡಿಬೆಟ್ಟದ ದೇಗುಲಕ್ಕೆ ಭಕ್ತರ ದರ್ಶನಕ್ಕೆ ನಿರ್ಬಂಧ ವಿಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಆಷಾಢ ಶುಕ್ರವಾರ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಹಿನ್ನೆಲೆಯಲ್ಲಿ ದೇವಸ್ಥಾನ ಬಂದ್ ಮಾಡಲಾಗಿದೆ. ಜಿಲ್ಲಾಧಿಕಾರಿಗಳ ಆದೇಶದಂತೆ ಇಂದಿನಿಂದ ಮಂಗಳವಾರದವರೆಗೆ ಚಾಮುಂಡಿಬೆಟ್ಟದಲ್ಲಿ ಸಾರ್ವಜನಿಕ ದರ್ಶನಕ್ಕೆ ನಿರ್ಬಂಧ ವಿಧಿಸಲಾಗಿದೆ. ಕರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಪ್ರತೀ ಆಷಾಢ ಶುಕ್ರವಾರ ಕೂಡಾ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದ್ದು, ಇದೀಗ ಕೊರೋನಾ ನಿಯಂತ್ರಣಕ್ಕೆ ಮೈಸೂರು ಜಿಲ್ಲಾಡಳಿತ ಪ್ರತೀ ಆಷಾಢ ಶುಕ್ರವಾರದ ಜೊತೆಗೆ ಪ್ರತೀ ಶನಿವಾರ ಹಾಗೂ ಭಾನುವಾರ ದಿನ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ ವಿಧಿಸುವ ಮೂಲಕ ಬಿಗಿ ಕ್ರಮ ಕೈಗೊಂಡಿದೆ. ಅಲ್ಲದೆ ಬರುವ ಮಂಗಳವಾರ ಆಷಾಢ ಮಂಗಳವಾರವಿರುವ ಹಿನ್ನೆಲೆ ಅಂದೂ ಸಹ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ. ಹೀಗಾಗಿ ಭಕ್ತಾದಿಗಳಿಗೆ ಮಂಗಳವಾರದವರೆಗೂ ತಾಯಿ ಚಾಮುಂಡೇಶ್ವರಿ ದರುಶನ ಭಾಗ್ಯ ಸಿಗುವುದಿಲ್ಲ. ಬುಧವಾರ ಮತ್ತೆ ದೇವಾಲಯ ಓಪನ್ ಆಗಲಿದ್ದು ಎಂದಿನಂತೆ ದೇವಸ್ಥಾನ ಪೂಜಾ ಕೈಂಕರ್ಯ ನಡೆಯಲಿದೆ. : - - --