ದೇಶದಲ್ಲಿ ಮೊದಲ ಅಹಿಂದ ಪ್ರಧಾನಿ ಅದು ನರೇಂದ್ರ ಮೋದಿ -ಕೈ’ ನಾಯಕರ ವಿರುದ್ದ ಮಾಜಿ ಸಚಿವ ಹೆಚ್.ವಿಶ್ವನಾಥ್ ಗುಡುಗು… ಮೈಸೂರು,ಜು,4,2020(..): ಪ್ರಧಾನಿ ಮೋದಿ ಅವರನ್ನ ಟೀಕಿಸುವ ಭರದಲ್ಲಿ ಲಘು ಹೇಳಿಕೆ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರ ವಿರುದ್ದ ಮಾಜಿ ಸಚಿವ ಹೆಚ್.ವಿಶ್ವನಾಥ್ ಗುಡುಗಿದ್ದಾರೆ. ಮೈಸೂರಿನಲ್ಲಿ ಮಾಧ್ಯಮಗಳ ಜತೆ ಇಂದು ಮಾತನಾಡಿದ ಹೆಚ್.ವಿಶ್ವನಾಥ್, ಮೋದಿ ಬಗ್ಗೆ ಸಿದ್ದರಾಮಯ್ಯ, ಖರ್ಗೆ ಮಾತನಾಡಿರುವುದು ಸಮಂಜಸವಲ್ಲ. ಒಬ್ಬ ಮುಖ್ಯಮಂತ್ರಿಯಾಗಿದ್ದವರು, ಕೇಂದ್ರ ಸಚಿವರಾಗಿದ್ದವರು ಇಷ್ಟು ಲಘುವಾಗಿ ಮಾತನಾಡಿವುದು ತಪ್ಪು. ದೇಶದಲ್ಲಿ ಮೊದಲ ಅಹಿಂದ ಪ್ರಧಾನಿ ಅದು ನರೇಂದ್ರ ಮೋದಿ. ಅವರು ಯಾವುದೇ ಬಲಿಷ್ಠ ಜಾತಿಯವರಲ್ಲ, ರಾಜಕೀಯ ಹಿನ್ನೆಲೆ ಹೊಂದಿದ್ದವರೂ ಅಲ್ಲ. ಅವರು ತಮ್ಮ ಕೆಲಸದಿಂದಲೇ ಅಧಿಕಾರಕ್ಕೆ ಬಂದವರು. 2001ಕ್ಕಿಂತ ಮುಂಚೆ ನರೇಂದ್ರ ಮೋದಿಗೆ ಐಡೆಂಟಿಟಿಯೇ ಇರಲಿಲ್ಲ. ಆದರೆ ಗುಜರಾತ್ ಸಿಎಂ ಆದ ನಂತರದಲ್ಲಿ ಅವರು ತಮ್ಮ ಕಾರ್ಯ ಸಾಧನೆ ಮಾಡಿ ತೋರಿಸಿದ್ದಾರೆ. ಗುಜರಾತ್ ಮಾಡಲ್ ಹೆಸರಿನಲ್ಲಿ ದೇಶದ ಪ್ರಧಾನಿಯಾಗಿದ್ದಾರೆ. ಅವರನ್ನು ಟೀಕಿಸುವ ಸಿದ್ದರಾಮಯ್ಯನವರ ಮಾಡೆಲ್ ಏನಿದೆ..? ಅನ್ನ ಭಾಗ್ಯ ನಿಮ್ಮದಲ್ಲ, ಅದರ ಸೃಷ್ಠಿ ಕರ್ತನೂ ನೀವಲ್ಲ, ಕಾರಣ ಕರ್ತನೂ ನೀವಲ್ಲ. ನನ್ನ ಆರು ಕಾರ್ಯಕ್ರಮಗಳನ್ನ ಪ್ರತಿಜ್ಞಾ ವಿಧಿಯಲ್ಲಿ ಬೋಧನೆ ಮಾಡಿದ್ರಿ ಅಷ್ಟೇ ಎಂದು ಸಿದ್ಧರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದರು. ದಾಖಲೆಗಳಿದ್ದರೇ ಬಿಡುಗಡೆ ಮಾಡಿ… ಪ್ರಧಾನಿ ಮೋದಿ ವಿರುದ್ಧ ಆಪಾದನೆ ಮಾಡುತ್ತಿರುವ ಪ್ರತಿಪಕ್ಷಗಳ‌ ನಾಯಕರು ದಾಖಲೆಗಳಿದ್ದರೇ ಬಿಡುಗಡೆ ಮಾಡಿ. ಕೇವಲ ಹಿಟ್ ಅಂಡ್ ರನ್ ನಂತೆ ಆರೋಪ ಮಾಡಬೇಡಿ. ಕಾಂಗ್ರೆಸ್ ನಾಯಕರೇ ಅಪ್ರಬುದ್ಧರಂತೆ ಮಾತನಾಡಬೇಡಿ ಎಂದು ಕಾಂಗ್ರೆಸ್ ನಾಯಕರ ವಿರುದ್ದ ಹೆಚ್.ವಿಶ್ವನಾಥ್ ಕಿಡಿಕಾರಿದರು. ಹಾಗೆಯೇ ಮಾಜಿ ಸಿಎಂ ಸಿದ್ಧರಾಮಯ್ಯ ವಿರುದ್ಧ ಕಿಡಿಕಾರಿದ ಹೆಚ್.ವಿಶ್ವನಾಥ್, ಜೆಡಿಎಸ್ ಪ್ರಾಥಮಿಕ ಸದಸ್ಯತ್ವದಿಂದ‌ ಕಿತ್ತು ಹಾಕಿದ್ದ ಸಿದ್ದರಾಮಯ್ಯರನ್ನು ಕಾಂಗ್ರೆಸ್ ಗೆ ಕರೆ ತಂದಿದ್ದೇ ನಾನು. ಹಿಂದುಳಿದ‌ ವರ್ಗಗಳ ನಾಯಕ ಸಿದ್ದರಾಮಯ್ಯರನ್ನು ಈ ರಾಜ್ಯದ ಮುಖ್ಯಮಂತ್ರಿ ಮಾಡಿದ್ದಕ್ಕೆ ಪಶ್ಚಾತ್ತಾಪ ಆಗಿಲ್ಲ, ಸಂತೋಷವಾಗಿದೆ. ಆದರೆ ಸಿದ್ದರಾಮಯ್ಯ ಎಲ್ಲರನ್ನೂ ತುಳಿಯುವ ಕೆಲಸ ಮಾಡಿದರು. ಎಲ್ಲರನ್ನೂ ತುಳಿಯುವುದೇ ಸಿದ್ದರಾಮಯ್ಯ ಕೆಲಸವಾಗಿದೆ ಎಂದು ಹೆಚ್.ವಿಶ್ವನಾಥ್ ಹರಿಹಾಯ್ದರು. ರಾಜ್ಯದಲ್ಲಿ ಎರಡು ಪ್ರತಿರೋಧದ ಪಕ್ಷಗಳು ಸೇರಿಕೊಂಡು ಸರ್ಕಾರ ರಚಿಸಿದ್ದೇ ಬ್ಲಂಡರ್ ಎಂದು ಹೆಚ್.ವಿಶ್ವನಾಥ್ ಟೀಕಿಸಿದರು. ಹಾಗೆಯೇ ನನಗೆ ಎಂ‌.ಎಲ್‌.ಸಿ ಸ್ಥಾನ ಸಿಗದಿದ್ದರೆ ಆಕಾಶಕ್ಕೂ ಹೋಗುವುದಿಲ್ಲ, ಪಾತಾಳಕ್ಕೂ ಹೋಗುವುದಿಲ್ಲ, ವಿಶ್ವನಾಥ್ ವಿಶ್ವನಾಥನೇ ಎನ್ನುವ ಮೂಲಕ ತನಗೆ ಎಂ‌.ಎಲ್‌‌.ಸಿ ಸ್ಥಾ‌ನ‌ ನೀಡಲು ಯಾವುದೇ ರೀತಿಯ ಕಾನೂನು ತೊಡಕಿಲ್ಲವೆಂದು ಪ್ರತಿಪಾದಿಸಿದರು. ಎಳಸು ಮುಂಡೇದೇ ಸರಿಯಾಗಿ ಮಾತನಾಡು: ಮಾಯಾವತಿ ಪತ್ರ ಬರೆದು ರಾಹುಲ್ ಗಾಂಧಿಗೆ ಬುದ್ದಿ ಹೇಳಿದ್ದಾರೆ… ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯಿಂದ ಪ್ರಧಾನಿ ನರೇಂದ್ರ ಮೋದಿ ಟೀಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ವಿಶ್ವನಾಥ್, ಎಳಸು ಮುಂಡೇದೇ ಸರಿಯಾಗಿ ಮಾತನಾಡು. ಹೀಗೆ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಮಾಯಾವತಿ ಪತ್ರ ಬರೆದು ರಾಹುಲ್ ಗಾಂಧಿಗೆ ಬುದ್ದಿ ಹೇಳಿದ್ದಾರೆ. ದೇಶದ ಸಮಗ್ರತೆಯ ವಿಚಾರ ಬಂದಾಗ ಸರಿಯಾಗಿ ಮಾತ‌‌ನಾಡಬೇಕು. ನೀವು ನಿಮ್ಮ ಪಕ್ಷದ ಪ್ರಧಾನಿಗಳಿಗೆ ಸರಿಯಾದ ಗೌರವ ಕೊಟ್ಟಿಲ್ಲ. ಮನಮೋಹನ್ ಸಿಂಗ್, ನರಸಿಂಹರಾವ್ ಅವರನ್ನು ನೀವು ಹೇಗೆ ನಡೆಸಿಕೊಂಡಿರಿ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಹೆಚ್.ವಿಶ್ವನಾಥ್ ಹೇಳಿದರು. : - – --- .