ಮೈಸೂರಿಗರ ಹೆಮ್ಮೆ, ಸಾವಿರಕ್ಕೆ ಒಬ್ಬ ಕಲಾವಿದ, ಹೂ ಮನದ ಈ ಚಿತ್ರ ಕಲಾವಿದ. ಮೈಸೂರು, ಜು.03, 2020 : (.. ) ಕೆಲವರಿರುತ್ತಾರೆ, ಡ್ರಾಯಿಂಗ್ ಮಾಡಿದ್ದೋ ಅಥವಾ ಕ್ಯಾಮೆರಾದಲ್ಲಿ ತೆಗದ ಫೋಟೋವೋ ಎಂದು ಅಚ್ಚರಿ ಪಡುವಷ್ಟರ ಮಟ್ಟಿಗೆ ಚಿತ್ರಕಲೆಯನ್ನು ಕರಗತ ಮಾಡಿಕೊಂಡಿರುತ್ತಾರೆ.ಬಹಳಷ್ಟು ಮಂದಿ ಕ್ಯಾಮೆರಾದಲ್ಲಿ ಫೋಟೋಗಳನ್ನು ತೆಗೆಯುತ್ತಾರೆ. ಆದರೆ ಅವರಲ್ಲಿ ಕೆಲವೇ ಕೆಲವು ಮಂದಿ ಕ್ರಿಯೇಟಿವ್‌ ಆಗಿ ಫೋಟೋ ತೆಗೆಯುತ್ತಾರೆ. ಅದೇ ರೀತಿ ಈ ಪೆನ್ಸಿಲ್‌ ಡ್ರಾಯಿಂಗ್‌ ಕಲಾವಿದ, ಬಿಡಿಸಿದ ಚಿತ್ರವನ್ನು ಮನುಷ್ಯ ಅಥವಾ ಪ್ರಾಣಿಗಳ ಬಳಿ ಇರಿಸಿದರೆ ಯಾವುದು ಫೋಟೋ , ಯಾವುದು ಡ್ರಾಯಿಂಗ್ ಎಂಬುದನ್ನು ಹೇಳಲು ತಿಣುಕಾಡಬೇಕಾಗುತ್ತದೆ. ಅಷ್ಟು ಕರಾರುವಕ್ಕಾಗಿರುತ್ತದೆ ಇವರ ಗೆರೆ, ಚುಕ್ಕಿಗಳ ಆಟ. ಮೇಲೆ ಹೇಳಿದ ವ್ಯಕ್ತಿಯ ಹೆಸರು ಮಹೇಂದ್ರ ಪ್ರಸಾದ್ ಎಂ.ಎಚ್. ಮೈಸೂರಿನ ಇವರಿಗೆ ಪೆನ್ಸಿಲ್ ಡ್ರಾಯಿಂಗ್ ಒಂದು ಹವ್ಯಾಸ. ಯಾವುದೇ ಚಿತ್ರಕಲೆ ಶಾಲೆಗೆ ತೆರಳಿ ಅಭ್ಯಾಸ ಮಾಡಿದವರಲ್ಲ. ಬದಲಿಗೆ ಸ್ವಯಂ ಆಸಕ್ತಿಯಿಂದ ಚಿತ್ರ ಬಿಡಿಸುವುದನ್ನು ಕಲಿತು ಈಗ ಅದನ್ನು ಕರತಲಾಮಲಕ ಮಾಡಿಕೊಂಡವರು. ಜಸ್ಟ್ ಕನ್ನಡ ಜತೆ ಮಾತನಾಡಿ ತಮ್ಮ ಈ ಹವ್ಯಾಸದ ಬಗ್ಗೆ ಮಹೇಂದ್ರ ಪ್ರಸಾದ್ ಎಂ.ಎಚ್. ಹೇಳಿದ್ದಿಷ್ಟು.. ಶಾಲಾ ದಿನಗಳಲ್ಲೂ ನನಗೆ ಡ್ರಾಯಿಂಗ್ ನಲ್ಲಿ ಆಸಕ್ತಿ. ಆಗೆಲ್ಲಾ ಪಠ್ಯ ಪುಸ್ತಕದಲ್ಲಿನ ಚಿತ್ರಗಳನ್ನೇ ಬರೆದು ಬರೆದು ಅಭ್ಯಾಸ ಮಾಡುತ್ತಿದ್ದೆ. ಬಳಿಕ ಪಿಯುಸಿಯಲ್ಲಿ ವಿಜ್ಞಾನದ ವಿದ್ಯಾರ್ಥಿಯಾದ ಕಾರಣ, ಜೀವಶಾಸ್ತ್ರದಲ್ಲಿ ಚಿತ್ರಗಳನ್ನು ಬಿಡಿಸುವ ಮೂಲಕ ಕೌಶಲ್ಯ ವೃದ್ಧಿಸಿಕೊಂಡೆ. ಜತೆಗೆ ಸ್ನೇಹಿತರಿಗೆ ನಾನೇ ಚಿತ್ರ ಬಿಡಿಸಿಕೊಡುತ್ತಿದ್ದೆ, ಇದು ಸಹ ನನ್ನ ಡ್ರಾಯಿಂಗ್ ಸ್ಕಿಲ್ ಇಂಪ್ರೂ ಆಗಲು ನೆರವಾಯಿತು.ಪದವಿಯಲ್ಲಿ ಕಂಪ್ಯೂಟರ್ ಸೈನ್ಸ್ ಅಭ್ಯಾಸ ಮಾಡಿ ಆನಂತರ ಒಂದು ವರ್ಷದ ಸಾಫ್ಟ್ ವೇರ್ ಡೆವಲೆಪ್ಮೆಂಟ್ ಕೋರ್ಸ್ ಮುಗಿಸಿ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಕ್ಕೆ ಸೇರಿದೆ. ಕೆಲ ವರ್ಷದ ಬಳಿಕ ಆ ಉದ್ಯೋಗ ಬಿಟ್ಟು, ಇದೀಗ ಎಂ.ಸಿ.ಎ ಜಾಹಿರಾತು ಸಂಸ್ಥೆಯಲ್ಲಿ ಜಾಹಿರಾತು ವಿನ್ಯಾಸಗಾರನಾಗಿ ಉದ್ಯೋಗ ಮಾಡುತ್ತಿರುವೆ. ಇಲ್ಲೂ ಸಹ ಬಿಡುವಿನ ವೇಳೆಯಲ್ಲಿ ನನ್ನ ಹವ್ಯಾಸ ಮುಂದುವರೆಸಿರುವೆ ಎಂದರು. ಪೆನ್ಸಿಲ್ ಡ್ರಾಯಿಂಗ್ ಜತೆಗೆ ಪೆಯಿಂಟಿಂಗ್ ನಲ್ಲೂ ಮಹೇಂದ್ರ ಪ್ರಸಾದ್ ಅವರಿಗೆ ಅತೀವ ಆಸಕ್ತಿ. ಹಲವಾರು ಪೇಯಿಂಟಿಂಗ್ಸ್ ರಚಿಸಿ ಮೆಚ್ಚುಗೆ ಪಡೆದಿದ್ದಾರೆ. ಇಷ್ಟೆಲ್ಲಾ ಪ್ರತಿಭಾವಂತರಾದರು ಎಲೆಮರೆಕಾಯಿಯಂತಿರುವ ಇವರು, ಯಾವುದೇ ಸ್ಪರ್ಧೆಗಳಲ್ಲೂ ಭಾಗವಹಿಸಿಲ್ಲ. ಹಾಗಾಗಿ ಯಾವುದೇ ಪ್ರಶಸ್ತಿಯೂ ಲಭಿಸಿಲ್ಲ. ಈ ಬಗ್ಗೆ ಅವರಿಗೆ ಬೇಸರವೂ ಇಲ್ಲ. ನನ್ನ ಹವ್ಯಾಸ ಡ್ರಾಯಿಂಗ್ ಬಿಡಿಸುವುದು. ಅದಕ್ಕೆ ಮನೆಯಲ್ಲಿ, ಕಚೇರಿಯಲ್ಲಿ ಪ್ರೋತ್ಸಾಹ ದೊರಕುತ್ತಿದೆ. ಅಷ್ಟಕ್ಕೆ ನಾನು ಧನ್ಯ ಎಂದು ಸಂಕೋಚದಿಂದಲೇ ನುಡಿದರು. ಪೆನ್ಸಿಲ್ ಚಿತ್ರ ಕಲೆಯಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿರುವ ಚಿತ್ರಗಾರ ಯವ ಕಲಾವಿದ ಮಹೇಂದ್ರ ಪ್ರಸಾದ್ ,ಸಾಮಾನ್ಯ ಚಿತ್ರ ಬರಹದಿಂದ ಆರಂಭವಾದ ಇವರ ಪಯಣ ಇದೀಗ ಪೆನ್ಸಿಲ್ ನಲ್ಲಿ ಅದ್ಬುತ ಚಿತ್ರಗಳನ್ನು ಬಿಡುಸುವ ಮಟ್ಟದವರೆಗೆ ತಲುಪಿದೆ. ಇವರ ಕೈಚಳಕದಲ್ಲಿ ಚಿತ್ರರಂಗ ಕಲಾವಿದರು, ಜಿಲ್ಲೆಯ ಪ್ರತಿಷ್ಠಿತ ಅಧಿಕಾರಿಗಳ, ಸಾಮಾಜಿಕ ಕಾರ್ಯಕರ್ತರ ಅದ್ಭುತ ಚಿತ್ರಗಳು ಮೂಡಿಬಂದಿದೆ. ನಮ್ಮ ಹೆಮ್ಮೆ : ಮಹೇಂದ್ರ ಪ್ರಸಾದ್ ಎಂ.ಹೆಚ್. ಒರ್ವ ಅದ್ಭುತ ಕಲಾವಿದರು. ಕಳೆದ ಎರಡು ವರ್ಷಗಳಿಂದ ನಮ್ಮ ಸಂಸ್ಥೆಯಲ್ಲಿ ಜಾಹಿರಾತು ವಿನ್ಯಾಸಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅತ್ಯಲ್ಪ ಸಮಯದಲ್ಲೇ ಒಳ್ಳೆಯ ಚಿತ್ರಗಳನ್ನು ಬಿಡಿಸುವ ಚಾಕಚಕ್ಯತೆ ಹೊಂದಿದ್ದಾರೆ. ಉಳಿದಂತೆ ಎಲ್ಲಾ ಕಲಾವಿದರಂತೆ ಇವರು ಸಹ ಮೂಡಿ. ಒಟ್ಟಾರೆ ಇವರು ನಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವುದು ನಮ್ಮ ಹೆಮ್ಮೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು ಎಂಸಿಎ ( ) ಮೈಸೂರು ಬ್ರ್ಯಾಂಚ್ ನ ಮುಖ್ಯಸ್ಥರಾದ ರಾಜೇಶ್ವರಿ. ( ಮಹೇಂದ್ರ ಪ್ರಸಾದ್ ಎಂ.ಹೆಚ್. 9886752762) : ---&