ವೀರಪ್ಪನ್ ಬಲಗೈ ಭಂಟರ ಬೆನ್ನುಮುರಿದ ವೆಂಕಟಸ್ವಾಮಿ ಅವರನ್ನು ಜೆಬಿ ರಂಗಸ್ವಾಮಿ ನೆನಪಿಸಿಕೊಂಡಿದ್ದು ಹೀಗೆ.. ಮೈಸೂರು, ಜೂ.28, 2020 : (.. ) ಕಾಡುಗಳ್ಳ, ದಂತಚೋರ ವೀರಪ್ಪನ್ ಬಲಗೈ ಭಂಟರ ಬೆನ್ನುಮುರಿದ ಪೊಲೀಸರ ಪೈಕಿ ಮೊದಲ ಸಾಲಿನಲ್ಲಿ ನಿಲ್ಲುವ ಹೆಸರಿನ ಪಿ.ವೆಂಕಟಸ್ವಾಮಿ ಇನ್ನಿಲ್ಲ. ಮೈಸೂರು ಜಿಲ್ಲಾ ಅಡಿಷನ್ ಎಸ್ಪಿಯಾಗಿ ನಿವೃತ್ತರಾಗಿದ್ದ ಪಿ.ವೆಂಕಟಸ್ವಾಮಿ ಕಳೆದ ಕೆಲದಿನಗಳಿಂದ ಹಾಸಿಗೆ ಹಿಡಿದಿದ್ದರು. ಚಿಕಿತ್ಸಗೆ ಸ್ಪಂಧಿಸದೆ ಶುಕ್ರವಾರ ಇಹಲೋಕ ತ್ಯಜಿಸಿದರು. ಮೃತ ವೆಂಕಟಸ್ವಾಮಿ ಬಗ್ಗೆ ಅವರ ಪೊಲೀಸ್ ಸ್ನೇಹಿತರಾಗಿರುವ ಜೆ.ಬಿ.ರಂಗಸ್ವಾಮಿ ಕಂಬನಿ ಮಿಡಿದಿದ್ದು, ಸ್ನೇಹಿತನ ಜತೆಗಿನ ಒಡನಾಟದ ಬಗ್ಗೆ ಫೇಸ್ ಬುಕ್ ಮುಖಪುಟದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅದು ಹೀಗಿದೆ… ವೀರಪ್ಪನ್ ಅಟ್ಟಹಾಸ ಅಡಗಿಸುವಲ್ಲಿ ವೆಂಕಣ್ಣ ಮತ್ತು ಮಂದಪ್ಪ ಜೋಡಿ ಅಹರ್ನಿಶಿ ಶ್ರಮಿಸಿದ್ದರು. ಸುಮಾರು ಇನ್ನೂರ ಎಂಬತ್ತಕ್ಕೂ ಹೆಚ್ಚು ಕಾಡುಗಳ್ಳರ ಖಚಿತ ಮಾಹಿತಿಯನ್ನು ಕಾಡುಮೇಡು ಅಲೆದು ಸಂಗ್ರಹಿಸಿ ವೀರಪ್ಪನ್ ಗುಂಪಿನ ಹೆಡೆ ಮುರಿದಿದ್ದರು. ವೆಂಕಣ್ಣನಿಗೆ ಕೋವೈನ (ಕೊಯಮತ್ತೂರು) ಶುದ್ಧ ತಮಿಳು ಮತ್ತು ಗ್ರಾಮ್ಯ ತಮಿಳು ಎರಡೂ ಗೊತ್ತಿತ್ತು. ಹೀಗಾಗಿ ಪಕ್ಕಾ ಮಾಹಿತಿಯನ್ನು ಗಡಿಭಾಗದಲ್ಲಿ ಹೆಕ್ಕಿ ತೆಗೆವಲ್ಲಿ ನಿಷ್ಣಾತರಾಗಿದ್ದರು. ತಮಿಳರೊಂದಿಗೆ ತಮಿಳನಾಗಿ ನಡೆದುಕೊಳ್ಳುವುದರಲ್ಲಿ ಆತ ಎತ್ತಿದ ಕೈ. ಸುಮಾರು ಹದಿನೆಂಟು ವರ್ಷಗಳ ಧೀರ್ಘಕಾಲ ಹನೂರು , ರಾಮಾಪುರ , ಕೊಳ್ಳೇಗಾಲ ಠಾಣೆಗಳಲ್ಲಿ ಕರ್ತವ್ಯ ಮಾಡುತ್ತ ವೀರಪ್ಪನ್ ಕಾರ್ಯಾಚರಣೆಯಲ್ಲಿದ್ದವರು ಅವರು. ಕರ್ನಾಟಕ ಮತ್ತು ತಮಿಳುನಾಡಿನ ಟಾಸ್ಕ್ ಫೋರ್ಸ್ ನ ಮೇಲಧಿಕಾರಿಗಳಿಗೆ ವೆಂಕಣ್ಣನವರ ಮಾತುಗಳ ಬಗ್ಗೆ ವಿಶ್ವಾಸ. ಯಾಕೆಂದರೆ ಅವರು ಹೆಕ್ಕುತ್ತಿದ್ದ ಮಾಹಿತಿಗಳು ಅಷ್ಟು ಖಚಿತವಾಗಿರುತ್ತಿದ್ದವು. ವೀರಪ್ಪನ್ ನ ಅಂತ್ಯ ಕಾಣಿಸಿದ ತಮಿಳುನಾಡಿನ ಪಡೆಯ ಮುಖ್ಯಸ್ಥ ವಿಜಯಕುಮಾರ್ ರವರಿಂದ ಹಿಡಿದು ಎಲ್ಲ ಅಧಿಕಾರಿಗಳೂ ವೆಂಕಣ್ಣನ ಕಾರ್ಯಕ್ಷಮತೆ ಕುರಿತಂತೆ ಆದರದಿಂದ ಕಾಣುತ್ತಿದ್ದರು. ಶ್ರೀ ವಿಜಯಕುಮಾರ್ ( ಈಗ ಜಮ್ಮು ಕಾಶ್ಮೀರದ ವಿಶೇಷ ಪಡೆ ಮುಖ್ಯಸ್ಥರಾಗಿದ್ದಾರೆ.) ತಮ್ಮ ವೀರಪ್ಪನ್ ಕುರಿತ ಪುಸ್ತಕದಲ್ಲಿ ವೆಂಕಣ್ಣನನ್ನು ಶ್ಲಾಘಿಸಿದ್ದಾರೆ. ವೆಂಕಣ್ಣ ಮತ್ತು ನಾನು ಇಬ್ಬರೂ ಒಮ್ಮೆ ಶ್ರೀ ವಿಜಯಕುಮಾರ್ ರನ್ನು ಭೆಟ್ಟಿಯಾದಾಗ ಅವರು , ವೆಂಕಣ್ಣನನ್ನು ಆದರಿಸಿ ಮಾತಾಡಿಸಿದ ರೀತಿಯಿಂದ ನನಗೇ ಸಂತೋಷವಾಗಿತ್ತು. : ---.--..--