ಪ್ರಧಾನಿ ಮೋದಿ ಅವರ ಮುಂದಿನ ಸಂಪುಟದಲ್ಲಿ ಡಾ.ಮಂಜುನಾಥ್ ಸಚಿವರಾಗುವುದು ಸತ್ಯ- ಶಾಸಕ ಮುನಿರತ್ನ. ರಾಮನಗರ, ಮಾರ್ಚ್​, 25,2024(..):ಪ್ರಧಾನಿ ಮೋದಿ ಅವರ ಮುಂದಿನ ಸಚಿವ ಸಂಪುಟದಲ್ಲಿ ಡಾ.ಮಂಜುನಾಥ್ ಸಚಿವರಾಗುವುದು ಸತ್ಯ ಎಂದು ಬಿಜೆಪಿ ಶಾಸಕ ಮುನಿರತ್ನ ತಿಳಿಸಿದ್ದಾರೆ. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಮುನಿರತ್ನ, ಡಾ.ಸಿ.ಎನ್ ಮಂಜುನಾಥ್ ಪರ ಮತ ಚಲಾಯಿಸುವಂತೆ ಮನವಿ ಮಾಡಿದರು. ಬೇರೆಯವರಿಗೆ ಮತ ಹಾಕಿದರೆ ಸ್ವಾರ್ಥಕ್ಕೆ ಹಾಕಿದಂತೆ. ಡಾ.ಸಿ.ಎನ್ ಮಂಜುನಾಥ್ ರಾಜಕಾರಣಕ್ಕೆ ಬಂದಿದ್ದು ಸ್ವಾರ್ಥಕ್ಕಲ್ಲ, ಜನಸೇವೆಗೆ. ಬೇರೆಯವರಿಗೆ ವೋಟ್ ಹಾಕಿದರೆ ಅದು ಸ್ವಾರ್ಥಕ್ಕೆ ಹೋಗುತ್ತದೆ. ದೇಶದ 140 ಕೋಟಿ ಜನರಿಗೂ ಡಾ. ಮಂಜುನಾಥ್​ ಸೇವೆ ಬೇಕು. ಮುಂದೆ ರಚನೆಯಾಗುವ ಕೇಂದ್ರ ಸರ್ಕಾರದಲ್ಲಿ ಮೈತ್ರಿಯಿಂದ ಸಚಿವರಾದರೆ ಅದು ಡಾ. ಮಂಜುನಾಥ್ ಎಂದು ಹೇಳಿದರು. ಸ್ವರ್ಗಕ್ಕೆ ಹೋಗಬೇಕೆಂಬ ಆಸೆ ಇದ್ದರೆ ಮಂಜುನಾಥ್​ಗೆ ಮತ ನೀಡಿ. ಒಂದು ತಪ್ಪು ಮತ ಹಾಕಿದರೆ ನಿಮಗೆ ಯಮ ಕಾಣಿಸುತ್ತಾನೆ. ಸ್ವರ್ಗಕ್ಕೆ ಹೋದರೆ ರಂಬೆ, ಊರ್ವಶಿ, ಮೇನಕೆ ನೋಡಬಹುದು. ನಾನು ‘ಕಠಾರಿವೀರ ಸುರಸುಂದರಾಂಗಿ’ ಎಂಬ ಸಿನಿಮಾ ಮಾಡಿದ್ದೇನೆ. ಅದರಲ್ಲಿ ಸ್ವರ್ಗ, ನರಕ ಹೇಗಿರುತ್ತದೆ ಎಂದು ನೋಡಿದ್ದೇನೆ. ನಿಮಗೆ ರಾಮ ಬೇಕಾ, ರಾವಣ ಬೇಕಾ ಎಂದು ಶಾಸಕ ಮುನಿರತ್ನ ಪ್ರಶ್ನಿಸಿದರು. : --. - – – ’ - – .