ಕಚ್ಚಾತೈಲ ಬೆಲೆ ಇಳಿಕೆ ನೋಡಿದ್ರೆ ಪೆಟ್ರೋಲ್ ಬೆಲೆ 25 ರಿಂದ 30 ರೂ ಇರಬೇಕಿತ್ತು-ಪ್ರತಿಭಟನೆಯಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿಕೆ…. ಮೈಸೂರು,ಜೂ,19,2020(..): ಕಚ್ಚಾತೈಲ ಬೆಲೆ ಇಳಿಕೆ ನೋಡಿದ್ರೆ ಇವತ್ತಿನ ಪೆಟ್ರೋಲ್ ಬೆಲೆ 25 ರಿಂದ 30 ರೂ ಇರಬೇಕಿತ್ತು ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಕೇಂದ್ರ ಸರ್ಕಾರದ ವಿರುದ್ದ ಕಿಡಿಕಾರಿದರು. ತೈಲ ಬೆಲೆ ಏರಿಕೆ ಖಂಡಿಸಿ ಮೈಸೂರಿನಲ್ಲಿ ಕೆ.ಆರ್ ಕ್ಷೇತ್ರದ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ನೇತೃತ್ವದಲ್ಲಿ ಚಿಕ್ಕಮ್ಮನಿಕೇತನ ಕಲ್ಯಾಣ ಮಂಟಪದ ಬಳಿ ವಿನೂತನ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ ಪಾಲ್ಗೊಂಡು ಗ್ರಾಹಕರಿಗೆ 25ರೂ ಗೆ ಒಂದು ಲೀ ಪೆಟ್ರೋಲ್ ಹಾಕಿ ಆಕ್ರೋಶ ಹೊರಹಾಕಿದರು. ಕಡಿಮೆ ದರದ ಪೆಟ್ರೋಲ್ ಗಾಗಿ ಸಾಮಾಜಿಕ ಅಂತರ ಮರೆತು ಜನರು ಮುಗಿಬಿದ್ದ ದೃಶ್ಯ ಕಂಡು ಬಂತು. ಪ್ರತಿಭಟನೆ ವೇಳೆ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಕಚ್ಛಾತೈಲ ಬೆಲೆ ಇಳಿಕೆ ನೋಡಿದ್ರೆ ಇವತ್ತಿನ ಪೆಟ್ರೋಲ್ ಬೆಲೆ 25 ರಿಂದ 30 ರೂ ಇರಬೇಕಿತ್ತು. ಕೇಂದ್ರ ಸರ್ಕಾರಕ್ಕೆ ಬಡವರ ಕಷ್ಟ ಗೊತ್ತಾಗುತ್ತಿಲ್ಲ. ಕಚ್ಚಾತೈಲದ ಬೆಲೆ ಇಳಿದರೂ ಪೆಟ್ರೋಲ್ ಬೆಲೆ ಇಳಿಸಿಲ್ಲ ಎಂದು ವಾಗ್ದಾಳಿ ನಡೆಸಿದರು. ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ವಿಚಾರ ಕುರಿತು ಮಾತನಾಡಿದ ಸಿದ್ಧರಾಮಯ್ಯ, ಇಂದಿರಾಗಾಂಧಿ ಕಾಲದಲ್ಲಿ ಉಳುವವನೆ ಭೂಮಿಯ ಒಡೆಯನಾಗಿದ್ದ. ಈಗ ಉಳ್ಳವನೇ ಭೂಮಿಯ ಒಡೆಯನಾಗಿದ್ದಾನೆ. ಸರ್ಕಾರ ಕರಾಳ ಶಾಸನ ತರಲು ಹೊರಟಿದೆ. ಕೊರೊನಾ ಬಳಸಿಕೊಂಡು ಸುಗ್ರಿವಾಜ್ಞೆ ಮೂಲಕ ಕಾಯ್ದೆ ತರಲು ಹೊರಟಿದೆ. ಈಗ ಯಾರು ಬೇಕಾದರೂ ಭೂಮಿ ಕೊಳ್ಳಬಹುದು. ಎಪಿಎಂಸಿ ಕಾಯ್ದೆಯನ್ನು ಹೀಗೆ ಮಾಡಿದರು. ತಕ್ಷಣವೇ ವಿಧಾನಸಭೆ ಅಧಿವೇಶನ ಕರೆಯಬೇಕು. ಈ ಎರಡು ಕಾಯ್ದೆ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಆಗಬೇಕು. ವಿರೋಧ ಪಕ್ಷಗಳನ್ನು ಎದುರಿಸುವ ಧೈರ್ಯ ಇದ್ದಿದ್ದರೆ ಅಧಿವೇಶನ ಕರೆಯುತ್ತಿದ್ದರು. ಅವರಲ್ಲಿ ವಿಪಕ್ಷಗಳನ್ನ ಎದುರಿಸುವ ಧೈರ್ಯ ಇಲ್ಲ‌ ಎಂದು ಲೇವಡಿ ಮಾಡಿದರು. : --- - -