ಕೊಳವೆ ಬಾವಿ ವಿಚಾರಕ್ಕೆ ಮಾಜಿ ಗ್ರಾ.ಪಂ ಅಧ್ಯಕ್ಷ ಮತ್ತು ಸಹೋದರನಿಂದ ದಲಿತರ ಮೇಲೆ ಹಲ್ಲೆ…. ತುಮಕೂರು,ಜೂ,15,2020(..): ಕೊಳವೆ ಬಾವಿ ವಿಚಾರಕ್ಕೆ ಸಂಬಂಧಿಸಿದಂತೆ ದಲಿತರ ಮೇಲೆ ಹಲ್ಲೆ ನಡೆದಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ. ತುಮಕೂರು ಜಿಲ್ಲೆ ಮಧುಗಿರಿಯ ತಿಪ್ಪಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹನುಮಂತರಾಯಪ್ಪ ಎಂಬುವರ ಮೇಲೆ ಮಾಜಿ ಗ್ರಾ.ಪಂ.ಅಧ್ಯಕ್ಷ ನರಸಿಂಹಮೂರ್ತಿ ಹಾಗೂ ಸಹೋದರ ಅಶ್ವಥ್ ಎಂಬುವವರಿಂದ ಹಲ್ಲೆ ನಡೆದಿದ್ದು ಹಲ್ಲೆಗೊಳಗಾದ ಹನುಮಂತರಾಯಪ್ಪ ಅವರ ಕೈ ಮುರಿದಿದೆ. ದಲಿತರಿಗೆ ಕೊಳವೆ ಬಾವಿಯಲ್ಲಿ ನೀರು ಸಿಕ್ಕಿದ್ದಕ್ಕೆ ಸವರ್ಣಿಯರು ಆಕ್ರೋಶ ವ್ಯಕ್ತಪಡಿಸಿದ್ದು ದಲಿತರು ಕೊರೆಸಿದ ಕೊಳವೆ ಬಾವಿಯಿಂದ ತಮ್ಮ ಬೋರ್ ನಲ್ಲಿ ನೀರು ಕಡಿಮೆಯಾಗುತ್ತದೆ ಎಂದು ಆವೇಶಗೊಂಡು ತಡರಾತ್ರಿ ದಲಿತರ ಮೇಲೆ ಜಗಳ ನಡೆಸಿದ್ದಾರೆ ಎನ್ನಲಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಹನುಮಂತರಾಯಪ್ಪ ಎಂಬುವವರ ಮೇಲೆ ಮಾಜಿ ಗ್ರಾ.ಪಂ.ಅಧ್ಯಕ್ಷ ನರಸಿಂಹಮೂರ್ತಿ ಹಾಗೂ ಸಹೋದರ ಅಶ್ವಥ್ ರಾಡ್ ನಿಂದ ಹಲ್ಲೆ ನಡೆಸಿದ್ದಾರೆ. ಇದರಿಂದಾಗಿ ಹನುಮಂತರಾಯಪ್ಪ ಅವರ ಕೈ ಮೂಳೆ ಹಾಗೂ ಕಾಲಿನ ತೊಡೆಗೆ ತೀವ್ರ ಗಾಯವಾಗಿದ್ದು ತೀವ್ರ ರಕ್ತಸ್ರಾವವಾದ ಕಾರಣ ರಾತ್ರಿಯೇ ತುಮಕೂರು ಜಿಲ್ಲಾಸ್ಪತ್ರೆಗೆ ವೃದ್ಧ ಹನುಮಂತಪ್ಪಅವರನ್ನ ರವಾನೆ ಮಾಡಲಾಗಿದೆ. ಮಧುಗಿರಿಯಲ್ಲಿ ಇತ್ತೀಚೆಗೆ ದಲಿತರ ಮೇಲೆ ದೌರ್ಜನ್ಯ ಹೆಚ್ಚುತ್ತಿದ್ದು ಹೀಗಾಗಿ ಹಲ್ಲೆ ಮಾಡಿದವರನ್ನು ಬಂಧಿಸಬೇಕೆಂದು ದಲಿತ ಸಂಘಟನೆಗಳು ಒತ್ತಾಯ ಮಾಡಿವೆ. ಮಿಡಿಗೇಶಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. : - - – -