ಎರಡು ಕ್ಷೇತ್ರಗಳಲ್ಲಿ ಸಚಿವರ ಮಕ್ಕಳು,ಸಂಬಂಧಿಕರಿಗೆ ಟಿಕೆಟ್ ಕೊಡಲು ಮೀನಾಮೇಷ: ಕಾಂಗ್ರೆಸ್ ವಿರುದ್ದ ಜಿಲ್ಲಾ ದಲಿತ ಮಹಾಸಭಾ ಅಸಮಾಧಾನ. ಮೈಸೂರು,ಮಾರ್ಚ್,22,2024(..):ಲೋಕಸಭೆ ಚುನಾವಣೆಗೆ ಕೋಲಾರ ಮತ್ತು ಚಾಮರಾಜನಗರ ಜಿಲ್ಲೆಯ ಟಿಕೆಟ್ ಕಾಂಗ್ರೆಸ್ ಗೆ ಕಗ್ಗಂಟಾಗಿದ್ದು ಈ ಮಧ್ಯೆ ಮೈಸೂರಿನಲ್ಲಿ ಕಾಂಗ್ರೆಸ್ ಹೈಕಮಾಂಡ್ ಮೇಲೆ ಅಸಮಾಧಾನ ಭುಗಿಲೆದ್ದಿದೆ. ಈ ಸಂಬಂಧ ಮೈಸೂರು ಜಿಲ್ಲಾ ದಲಿತ ಮಹಾಸಭಾ ಸುದ್ದಿಗೋಷ್ಠಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ದಲಿತ ಮಹಾ ಸಭಾ ಅಧ್ಯಕ್ಷ ಎಸ್ ರಾಜೇಶ್, ಲೋಕಸಭಾ ಚುನಾವಣೆಗೆ ಐವರು ಸಚಿವರ ಮಕ್ಕಳಿಗೆ ಸ್ಪರ್ಧೆಗೆ ಅವಕಾಶ ಕೊಟ್ಟಿದೆ. ಆದರೆ ಚಾಮರಾಜನಗರ, ಕೋಲಾರ ಕ್ಷೇತ್ರಗಳಿಗೆ ಸಚಿವ ಮಕ್ಕಳು ಸಂಬಂಧಿಕರಿಗೆ ಟಿಕೆಟ್ ಕೊಡಲು ಮೀನಾಮೇಷ ಎಣಿಸುತ್ತಿದ್ದಾರೆ ಇದು ಖಂಡನೀಯ ಎಂದು ಕಿಡಿಕಾರಿದರು. ಚಾಮರಾಜನಗರ, ಕೋಲಾರ ಕ್ಷೇತ್ರಗಳಿಗೆ ಮಂತ್ರಿಗಳ ಮಕ್ಕಳು, ಸಂಬಂಧಿಕರಿಗೆ ಟಿಕೆಟ್ ಕೊಡಲು ಮೀನಾ ಮೇಷ ಎಣಿಸುತ್ತಿದೆ. ಚಾಮರಾಜನಗರ ಕ್ಷೇತ್ರಕ್ಕೆ ಎಚ್.ಸಿ ಮಹದೇವಪ್ಪ ಅವರ ಪುತ್ರ ಸುನಿಲ್ ಬೋಸ್ ಗೆ ಅವಕಾಶ ಮಾಡಿಕೊಡಬೇಕು, ಕೋಲಾರದಲ್ಲಿ ಸಚಿವ ಮುನಿಯಪ್ಪ ಅವರ ಅಳಿಯನಿಗೆ ಟಿಕೆಟ್ ಕೊಡಬೇಕು. ಈ ವಿಚಾರದಲ್ಲಿ ಪಕ್ಷದ ವರಿಷ್ಠರು ಅಸ್ಪೃಶ್ಯತೆ ಆಚರಣೆ ಮಾಡುತ್ತಿದ್ದಾರೆ ಈ ತಾರತಮ್ಯ ಸರಿಯಲ್ಲ ಮತ ಹಾಕಲು ಮಾತ್ರ ದಲಿತರು ಬೇಕು ಬೇರೆಯದ್ದಕ್ಕೆ ಬೇಕಿಲ್ವಾ.? ಎಂದು ಆಕ್ರೋಶ ವ್ಯಕ್ತಪಡಿಸಿದರು. ಮೇಲ್ವರ್ಗದ ಸಚಿವ ಈಶ್ವರ್ ಖಂಡ್ರೆ ಮಗ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್, ಸಚಿವ ಶಿವನಂದಪಾಟೀಲ್ ಪುತ್ರಿ ಸಂಯುಕ್ತ ಪಾಟೀಲ್ ಸೇರಿದಂತೆ ಐವರು ಸಚಿವರ ಮಕ್ಕಳಿಗೆ ಟಿಕೆಟ್ ಕೊಟ್ಟಿದ್ದೀರಾ ಚಾಮರಾಜನಗರಕ್ಕೆ ಯಾಕೆ ಕೊಡಲು ಮೀನಾ ಮೇಷ ಎಣಿಸುತ್ತಿದ್ದೀರಾ ಎಂದು ಪ್ರಶ್ನಿಸಿದರು. ಸುದ್ದಿಗೋಷ್ಠಿಯಲ್ಲಿ ದಲಿತಪರ ಸಂಘಟನೆಗಳ ಮುಖಂಡರಾದ ಕಿರಣ್ ಕುಮಾರ್, ಶಿವರುದ್ರ, ಮಹೇಶ್ ಎಸ್ ಎ ರಹೀಮ್, ಮಹಮ್ಮದ್ ಇಬ್ರಾಹಿಂ ಮತ್ತಿತರರು ಭಾಗಿಯಾಗಿದ್ದರು. : ----