ಹುಚ್ಚ ವೆಂಕಟ್ ಮೇಲೆ ಹಲ್ಲೆ: ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡ ಮಂಡ್ಯ ಜಿಲ್ಲೆ ಪೊಲೀಸರು ಮಂಡ್ಯ, ಜೂನ್ 13, 2020 (..): ಮಂಡ್ಯ ಜಿಲ್ಲೆಯಲ್ಲಿ ನಟ ಹುಚ್ಚ ವೆಂಕಟ್ ಅವರ ಮೇಲೆ ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಪೊಲೀಸರು ಸ್ವಯಂಪ್ರೇರಿತರಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಂಡ್ಯ ಜಿಲ್ಲೆ ಶ್ರೀನಿವಾಸಪುರ ಸಮೀಪದ ಉಮ್ಮಡಹಳ್ಳಿ ಗೇಟ್ ಬಳಿ ಇರುವ ಗೂಡಂಗಡಿ ಎದುರು ಹುಚ್ಚ ವೆಂಕಟ್ ಅವರ ಮೇಲೆ ಕೆಲವು ಯುವಕರು ಹಲ್ಲೆ ಮಾಡಿದ ಹಿನ್ನೆಲೆಯಲ್ಲಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗೂಡಂಗಡಿ ಮಾಲೀಕರು ಕೂಡ ದೂರು ನೀಡಿದ್ದಾರೆ ಎನ್ನಲಾಗಿದೆ. ವಿನಾಕಾರಣ ಹುಚ್ಚ ವೆಂಕಟ್ ಅವರ ಮೇಲೆ ಹಲ್ಲೆ ಮಾಡಿದ್ದ ವಿಡಿಯೋ ಗಮನಿಸಿದ ನಟರಾದ ಜಗ್ಗೇಶ್ ಮತ್ತು ದುನಿಯಾ ವಿಜಯ್ ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸಿದ್ದರು.