ದಿನೇ ದಿನೇ ಕರೋನಾ ಪ್ರಕರಣ ಹೆಚ್ಚಳ: ಇಂತಹ ಸಂದರ್ಭದಲ್ಲಿ ಶಾಲೆ ಪ್ರಾರಂಭಿಸುವ ನಿರ್ಧಾರ ಸರಿಯಲ್ಲ- ಮೈಸೂರು ನಗರ ಕಾಂಗ್ರೆಸ್ ಸಮಿತಿ ಖಂಡನೆ… ಮೈಸೂರು,ಜೂ,4,2020(..): ರಾಜ್ಯದಲ್ಲಿ ಕರೊನಾ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಶಾಲೆ ಪ್ರಾರಂಭಿಸುವ ನಿರ್ಧಾರ ಸರಿಯಲ್ಲ ಎಂದು ಕಾಂಗ್ರೆಸ್ ವಕ್ತಾರ ರಾಜೇಶ್ ಹೇಳಿದರು. ಖಾಸಗಿ ಶಾಲೆಗಳ ಒತ್ತಡಕ್ಕೆ ಮಣಿದು ಶಾಲೆ ಪ್ರಾರಂಭದ ಸರ್ಕಾರದ ನಿರ್ಧಾರ ವಿರುದ್ಧ ಮೈಸೂರು ನಗರ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಯಿತು. ಈ ವೇಳೆ ಮಾತನಾಡಿದ ಕಾಂಗ್ರೆಸ್ ವಕ್ತಾರ ರಾಜೇಶ್, ಈಗಾಗಲೇ ಜುಲೈ 1 ರಿಂದ ಸರ್ಕಾರ ಶಾಲೆಗಳ ಪ್ರಾರಂಭಕ್ಕೆ ಚಿಂತನೆ ನಡೆಸಿದೆ. ರಾಜ್ಯದಲ್ಲಿ ಕರೊನಾ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಶಾಲೆ ಪ್ರಾರಂಭಿಸುವ ನಿರ್ಧಾರ ಸರಿಯಲ್ಲ. ಶಾಲೆಗಳಲ್ಲಿ ಸಾರ್ವಜನಿಕ ಅಂತರ ಕಾಪಾಡುವ ಕುರಿತು ಸಿದ್ಧತೆಯನ್ನೆ ಮಾಡಿಕೊಂಡಿಲ್ಲ. ಇದೀಗ ಏಕಾಏಕಿ ಶಾಲೆ ತೆರೆಯುವ ನಿರ್ಧಾರ ಮಾಡಿರುವುದು ಖಂಡನೀಯ ಎಂದು ಹೇಳಿದರು. ಪ್ರತಿ ನಿತ್ಯ ಶಾಲೆಗಳನ್ನು, ಶಾಲಾ ಬಸ್ ಗಳನ್ನು ಸ್ಯಾನಿಟೈಜ್ ಮಾಡುವುದರ ಕುರಿತು ಖಚಿತತೆ ಇಲ್ಲ. ಸಚಿವ ಸುರೇಶ್ ಕುಮಾರ್ ರವರು ಪೋಷಕರು ನಿರ್ಧಾರದ ಮೇಲೆ ಶಾಲೆ ಪುನರಾರಂಭದ ಕುರಿತು ಹೇಳಿಕೆ ನೀಡಿದ್ದರು. ಈಗ ಏಕಾಏಕಿ ಜುಲೈ 1 ರಿಂದ ಪ್ರಾರಂಭಿಸುವುದಾಗಿ ಹೇಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಇನ್ನು ನಂಜನಗೂಡಿನ ರೀಡ್ ಅಂಡ್ ಟೈಲರ್ ಕಾರ್ಖಾನೆ ಪುನರಾರಂಭ ಮಾಡಲು ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ಬಿಜೆಪಿ ಸರ್ಕಾರ ಧರ್ಮ ತಾರತಮ್ಮ ಮಾಡುತ್ತಿದೆ. ದೇಶದಲ್ಲಿ ಸುಮಾರು 40 ಕೋಟಿಗೂ ಅಧಿಕ ಮುಸ್ಲಿಂ ಬಾಂಧವರಿದ್ದಾರೆ. ಅದರಲ್ಲಿ ಬಹುತೇಕರು ಬೀಡಿ ಕಾರ್ಮಿಕರು, ಗ್ಯಾರೇಜ್ ನಲ್ಲಿ ಕೆಲಸ ನಿರ್ವಹಿಸುವರು. ಆದರೆ ಸರ್ಕಾರ ಇದುವರೆಗೂ ಮುಸ್ಲಿಂ ಜನಾಂಗಕ್ಕೆ ಯಾವುದೇ ಪರಿಹಾರ ನೀಡಿಲ್ಲ. ಜೊತೆಗೆ ರಾಜ್ಯ ಸರ್ಕಾರ ಕ್ರೈಸ್ತರಿಗೆ ಕ್ರಿಶ್ಚಿಯನ್ ಅಭಿವೃದ್ಧಿ ಮಂಡಳಿ ತೆರೆಯುವ ಮೂಲಕ 500 ಕೋಟಿಗಳನ್ನು ಇದರ ಅಭಿವೃದ್ಧಿಗೆ ಮೀಸಲಿಡಬೇಕು ಎಂದು ಕಾಂಗ್ರೆಸ್ ವಕ್ತಾರ ರಾಜೇಶ್ ಸರ್ಕಾರಕ್ಕೆ ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಎಐಸಿಸಿ ಸದಸ್ಯ ಕೈಸರ್ ಅಹ್ಮದ್, ನಗರ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಸುನಂದ್ ಕುಮಾರ್ ಸೇರಿದಂತೆ ಕಾಂಗ್ರೆಸ್ ಪದಾಧಿಕಾರಿಗಳು ಭಾಗಿಯಾಗಿದ್ದರು. : - – - – --