ಸಚಿವ ಸುರೇಶ್ ಕುಮಾರ್ ಗಮನಕ್ಕೆ : ಹೀಗೆ ಮಾಡಿದರೆ ನಿರಾತಂಕವಾಗಿ ಎಸ್.ಎಸ್.ಎಲ್.ಸಿ ಪರೀಕ್ಷೆ ಮುಂದೂಡಬಹುದಲ್ಲವೆ ? ಬೆಂಗಳೂರು, ಮಾ.21, 2020 : ಪರೀಕ್ಷಾ ಸಿದ್ಧತೆಗಳು ಸಂಪೂರ್ಣಗೊಂಡಿವೆ, ಯಾವ್ಯಾವ ಕೇಂದ್ರಗಳಲ್ಲಿ ಯಾರ‍್ಯಾರನ್ನು ನಿಯೋಜಿಸಬೇಕೆಂಬುದೂ ಅಂತಿಮಗೊಂಡಿದೆ.ನಾನಾ ಹಂತಗಳನ್ನು ದಾಟಿ ಪ್ರಶ್ನೆಪತ್ರಿಕೆ ಮುದ್ರಣಗೊಂಡಿವೆ ಉತ್ತರ ಬರೆಯಲು ವಿದ್ಯಾರ್ಥಿಗಳು ಸನ್ನದ್ಧರಾಗಿದ್ದಾರೆ. ಈಗ ಪರೀಕ್ಷೆ ಮುಂದೂಡಿಕೆ ಸಾಧ್ಯವೇ ಎಂಬುದು ಸರ್ಕಾರದ ಆತಂಕ. ಆದರೆ ಇವೆಲ್ಲದಕ್ಕಿಂತ ಹೆಚ್ಚಾಗಿ ಕೊರೊನಾ ಭೀತಿ ಕಾಡುತ್ತಿದೆ. ಯಾರೂ ಗುಂಪು ಸೇರಬಾರದು, ಒಬ್ಬರಿಂದ ಒಬ್ಬರಿಗೆ ದೈಹಿಕ ಅಂತರವಿರಲಿ ಎಂದು ಸರ್ಕಾರವೇ ಹೇಳುತ್ತಿದೆ. ಪರೀಕ್ಷಾ ಕೇಂದ್ರದಲ್ಲಿ ಮಕ್ಕಳು ಈಸೂಚನೆಗಳನ್ನು ಪಾಲಿಸಲು ಸಾಧ್ಯವೇ… ಪರೀಕ್ಷಾ ಸಿದ್ಧತೆಗಳ ಬಗ್ಗೆ ಪರಸ್ಪರರು ಚರ್ಚಸಿಕೊಂಡು ತಮ್ಮ ಮನದ ದುಗುಡ, ಆತಂಕ ನಿವಾರಿಸಿಕೊಳ್ಳಬೇಡಿ ಎನ್ನಲಾಗುತ್ತದೆಯೇ ?ಈ ಹಿನ್ನೆಲೆಯಲ್ಲಿ ಪ್ರಶ್ನೆಪತ್ರಿಕೆ ಸಿದ್ಧತೆ ಹೊರತುಪಡಿಸಿ ಉಳಿದೆಲ್ಲ ಪೂರ್ವಸಿದ್ಧತೆ ಉಳಿಸಿಕೊಂಡು ಪರೀಕ್ಷೆ ಮುಂದೂಡಲು ಸಾಧ್ಯವಿದೆ. ಅದಕ್ಕಾಗಿ ಮಾಡಬೇಕಿರುವುದಿಷ್ಟೆ ಎಂದು ಫೇಸ್ ಬುಕ್ ಪೇಜ್ ಮೂಲಕ ಸಲಹೆ ನೀಡಿದ್ದಾರೆ ಹಿರಿಯ ಪತ್ರಕರ್ತ ಕುಮಾರ ರೈತ. ಒಟ್ಟಾರೆ ಅವರು ಹೇಳಿರುವುದಿಷ್ಟು…. 1. ರಾಜ್ಯದ ಎಲ್ಲ ಪರೀಕ್ಷಾ ಕೇಂದ್ರಗಳಿಗೆ ನಿಯೋಜಿಸಲ್ಪಟ್ಟ ಶಿಕ್ಷಕರು, ನಿಯೋಜಿತ ಅಧಿಕಾರಿಗಳು ತಮ್ಮತಮ್ಮ ಆಂಡ್ರಾಯ್ಡ್ ಮೊಬೈಲಿನಲ್ಲಿ ಟೆಲಿಗ್ರಾಂ ಆ್ಯಪ್ ಇನ್‍ಸ್ಟಾಲ್ ಮಾಡಿಕೊಳ್ಳುವಂತೆ, ಯಾವುದೇ ಕಾರಣಕ್ಕೂ ಡಿಲೀಟ್ ಮಾಡದಂತೆ ಸೂಚನೆ ನೀಡಿ2. ಈ ಎಲ್ಲ ಶಿಕ್ಷಕರ ಮೊಬೈಲ್ ನಂಬರ್‍ಗಳು ಇಲಾಖೆಯ ನಿಯೋಜಿತ ಅಧಿಕಾರಿಗಳು ಮಾತ್ರ ಇರುವ ಮಾತ್ರ ಟೆಲಿಗ್ರಾಂ ಆ್ಯಪ್ ಅಥವಾ ಚಾನೆಲ್ ಮಾಡಿ.3. ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ತಜ್ಞರಿಗೆ ತಲಾ ಹತ್ತು (ಪ್ರತಿ ವಿಷಯಕ್ಕೆ) ಪ್ರಶ್ನೆಯ ಸಾಫ್ಟ್ ಕಾಪಿ ಕೊಡುವಂತೆ ಹೇಳಿ. ಒಂದು ಸಬ್ಜೆಕ್ಟಿಗೆ ಕನಿಷ್ಟ 10 ತಜ್ಞರಿರಲಿ. ಅಲ್ಲಿಗೆ ನೂರು ಪ್ರಶ್ನೆಗಳಾಗುತ್ತವೆ.4. ಪರೀಕ್ಷೆ ಶುರುವಾಗುವುದಕ್ಕೂ ಮೂರುತಾಸು ಮುನ್ನ ಮುಚ್ಚಿದ ಕೊಠಡಿಯಲ್ಲಿ ತಜ್ಞರ ಮತ್ತೊಂದು ತಂಡ ರ‍್ಯಾಂಡಮ್ ಆಗಿ ಅಗತ್ಯವಿರುವಷ್ಟು ಸಂಖ್ಯೆಯ ಪ್ರಶ್ನೆಗಳನ್ನು ಸೆಲೆಕ್ಟ್ ಮಾಡಲಿ. ಈ ಹಂತದಲ್ಲಿ ಗರಿಷ್ಟ ಗೌಪ್ಯತೆ ಕಾಪಾಡಿಕೊಳ್ಳಬೇಕು.‌ಕೊಠಡಿಯೊಳಗೆ ತಜ್ಞರ ತಂಡದ ಮುಖ್ಯಸ್ಥರನ್ನು ಹೊರತುಪಡಿಸಿ ಉಳಿದವರ‍್ಯಾರು ಕೊಠಡಿಯೊಳಗೆ ಮೊಬೈಲ್ ನಿರ್ಬಂಧಿಸಬೇಕು.5. ಪರೀಕ್ಷೆ ಆರಂಭವಾಗುವುದಕ್ಕೆ ಅರ್ಧಗಂಟೆ ಮೊದಲೇ ಕೇಂದ್ರದ ಆಯಾ ಕೊಠಡಿಗಳಲ್ಲಿ ನಿಯೋಜಿತ ಮೇಲ್ವಿಚಾರಕರು ಹಾಜರಿರಬೇಕು.6. ಪರೀಕ್ಷಾ ಸಮಯ ಸಮೀಪಿಸುತ್ತಿದಂತೆ ಸಿದ್ದಪಡಿಸಿದ ಪ್ರಶ್ನೆಪತ್ರಿಕೆಯನ್ನು ಟೆಲಿಗ್ರಾಂ ಆ್ಯಪ್ ನಲ್ಲಿ ಫ್ಲಾಷ್ ಮಾಡಿ. ಇವುಗಳನ್ನು ಶಿಕ್ಷಕರು ಪರೀಕ್ಷಾ ಹಾಲ್ ಬೋರ್ಡ್ ಮೇಲೆ‌ ಬರೆಯಲಿ.7. ವಿದ್ಯಾರ್ಥಿಗಳು ಪ್ರಶ್ನೆಪತ್ರಿಕೆ ಬರೆದುಕೊಂಡು ಪರೀಕ್ಷೆ ನಂತರ ಮನೆಗೆ ತೆಗೆದುಕೊಂಡು ಹೋಗಲು‌ ಖಾಲಿ ಹಾಳೆಗಳನ್ನು ಕೊಡಿ.8. ಈ ಪ್ರಕ್ರಿಯೆಗಾಗಿ ಪರೀಕ್ಚಾ ಸಮಯವನ್ನು ಅರ್ಧತಾಸು ವಿಸ್ತರಿಸಬಹುದು.9.ಪ್ರತಿ ಪರೀಕ್ಷೆಯ ದಿನದಂದೇ ಸಿದ್ಧಪಡಿಸಿದ ಪ್ರಶ್ನೆಪತ್ರಿಕೆ ಫ್ಲಾಷ್ ಮಾಡಬೇಕು. ಹೀಗೆ ಮಾಡುವುದರಿಂದ ಪರೀಕ್ಷೆಗಿಂತ ಮುಂಚೆ ಪ್ರಶ್ನೆಪತ್ರಿಕೆ ಸೋರಿ ಹೋಗುವುದನ್ನು ತಪ್ಪಿಸಬಹುದು. ಕೋಟ್ಯಂತರ ರೂಪಾಯಿ ಉಳಿತಾಯ ಮಾಡಬಹುದು. ಪ್ರಶ್ನೆಪತ್ರಿಕೆ ಮುದ್ರಿಸಲು ಬಳಕೆಯಾಗುವ ಲಕ್ಷಾಂತರ ಟನ್ ಕಾಗದ ಉಳಿತಾಯ ಮಾಡಬಹುದು.ಶಿಕ್ಷಣ ಇಲಾಖೆಯ ಮುಖ್ಯಸ್ಥರು, ಸಚಿವರು ದೃಢ ಸಂಕಲ್ಪ ಮಾಡಿದರೆ ಈ ವ್ಯವಸ್ಥೆ ತರುವುದೇನೂ ಕಷ್ಟವಲ್ಲ. ಇದರಲ್ಲಿಯೂ ಬಾಧಕಗಳಿರಬಹುದು. ಆದರೆ ಯೋಜಿತವಾಗಿ ಮಾಡಿದರೆ ಸಮಸ್ಯೆಗಳು ಬರಲಾರದು ಎಂಬುದು ಪತ್ರಕರ್ತ ಕುಮಾರ ರೈತ ಅವರ ಅಭಿಪ್ರಾಯ. ಈ ನಿಟ್ಟಿನಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಗಮನ ಹರಿಸಿ ಸೂಕ್ತ ನಿರ್ಧಾರಕ್ಕೆ ಬರಬೇಕಿದೆ. : ----.-.