ಸದಾನಂದಗೌಡರಿಗೆ ಟಿಕೆಟ್ ಸಿಗುವ ವಿಶ್ವಾಸ: ಯಾರೂ ಕೂಡಾ ಧೃತಿಗೆಡುವುದು ಬೇಡ- ಆರ್.ಅಶೋಕ್. ಬೆಂಗಳೂರು, ಮಾರ್ಚ್​ 13,2024(..):ಲೋಕಸಭೆ ಚುನಾವಣೆಗೆ ರಾಜ್ಯ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿದ್ದು, ಹಲವು ಹಾಲಿ ಸಂಸದರಿಗೆ ಟಿಕೆಟ್ ಕೈತಪ್ಪುವ ಸಾಧ್ಯತೆ ಇದೆ. ಈ ಸಂಬಂಧ ಪ್ರತಿಕ್ರಿಯಿಸಿರುವ ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್, ಯಾರೂ ಕೂಡಾ ಧೃತಿಗೆಡುವುದು ಬೇಡ, ಕೊನೆಯ ಕ್ಷಣದವರೆಗೂ ನಿಮ್ಮ ಪ್ರಯತ್ನ ಮುಂದುವರಿಸಿ ಎಂದು ಹೇಳಿದ್ದಾರೆ. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಆರ್.ಅಶೋಕ್, ಮೂವರು ಮಾಜಿ ಮುಖ್ಯಮಂತ್ರಿಗಳ ಸ್ಪರ್ಧೆ ಬಗ್ಗೆಯೂ ಚರ್ಚೆಯಾಗಿದೆ. ಎಷ್ಟು ಜನರಿಗೆ ಟಿಕೆಟ್ ಕೊಡುತ್ತಾರೆ ಗೊತ್ತಿಲ್ಲ. ಸದಾನಂದ ಗೌಡರಿಗೆ ಟಿಕೆಟ್ ಕೊಡಬೇಕು ಅಂತ ನಾವೆಲ್ಲರೂ ಹೇಳಿದ್ದೇವೆ. ಸದಾನಂದ ಗೌಡರಿಗೆ ಟಿಕೆಟ್ ಸಿಗುವ ವಿಶ್ವಾಸವಿದೆ ಎಂದರು. ಮೈಸೂರು ಮಹಾರಾಜರಿಗೆ ಟಿಕೆಟ್ ಕೊಡುತ್ತಾರೆ ಅಂತ ನನಗೆ ಗೊತ್ತಿಲ್ಲ. ನಾನಂತೂ ಅವರನ್ನು ಸಂಪರ್ಕ ಮಾಡಿಲ್ಲ. ಪಕ್ಷ ಯಾರಿಗೆ ಟಿಕೆಟ್ ಕೊಡುತ್ತದೆ ಅವರ ಪರವಾಗಿ ಕೆಲಸ ಮಾಡುತ್ತೇವೆ ಎಂದು ಮೈಸೂರು ಜಿಲ್ಲಾಧ್ಯಕ್ಷರು ಹೇಳಿದ್ದಾರೆ. ಪ್ರತಾಪ್​ ಸಿಂಹ ಕೂಡ ಅದೇ ಮಾತು ಹೇಳಿದ್ದಾರೆ. ತಾಳ್ಮೆಯಿಂದ ಕಾಯುವುದು ಒಳ್ಳೆಯದು. ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ಕೊನೆಯವರೆಗೂ ಕಾಯುವುದು ಒಳ್ಳೆಯದು ಎಂದು ಆರ್.ಅಶೋಕ್ ಸಲಹೆ ನೀಡಿದರು. : - - –- – . .