ಕೊಳೆತ ಹಣ್ಣುಗಳ ಜೊತೆ ಒಳ್ಳೆಯ ಹಣ್ಣುಗಳು ಸೇರಿ ಹಾಳಾಗಬಹುದೇ..? ಸಚಿವ ಸುರೇಶ್ ಕುಮಾರ್ ಗೆ ಸುದೀರ್ಘ ಪತ್ರ ಬರೆದ ಹಿರಿಯ ಸಾಹಿತಿ ದೇವನೂರು ಮಹಾದೇವ್… ಮೈಸೂರು,ಮಾ,2,2020(..): ಸ್ವಾತಂತ್ರ ಹೋರಾಟಗಾರ ದೊರೆಸ್ವಾಮಿ ಅವರ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಸಮರ್ಥಿಸಿಕೊಂಡಿದ್ದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಹಿರಿಯ ಸಾಹಿತಿ ದೇವನೂರು ಮಹಾದೇವ್ ಸುದೀರ್ಘ ಪತ್ರ ಬರೆದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೊರೆಸ್ವಾಮಿಯವರನ್ನ, ನಕಲಿ ಸ್ವಾತಂತ್ರ್ಯ ಹೋರಾಟಗಾರ, ಪಾಕ್ ಏಜೆಂಟ್ ಎಂದಿರುವ ರಾಜಕಾರಣಿಗಳ ವಿರುದ್ಧ ಪತ್ರದಲ್ಲಿ ಹಿರಿಯ ಸಾಹಿತಿ ದೇವನೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಆಡಬಾರದ ಮಾತನ್ನಾಡಿದರೆ ಕೇಳಬಾರದ ಮಾತು ಕೇಳಬೇಕಾಗುತ್ತದೆ ಎಂದು ದೊರೆಸ್ವಾಮಿ ಅವರ ಬಗ್ಗೆ ಹೇಳಿಕೆ ನೀಡಿದ್ದ ಸಚಿವ ಸುರೇಶ್ ಕುಮಾರ್ ವಿರುದ್ದವೂ ದೇವನೂರು ಮಹದೇವ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ರಾಜಕಾರಣಿಗಳನ್ನ ಕೊಳೆತ ಹಣ್ಣುಗಳಿಗೆ ಹೊಲಿಸಿ ಸಚಿವ ಸುರೇಶ್ ಕುಮಾರ್ ಗೆ ಇಮೇಲ್ ಮೂಲಕ ಪತ್ರ ಬರೆದಿರುವ ದೇವನೂರು ಮಹದೇವ್, ಸುರೇಶ್ ಕುಮಾರ್ ಹೇಳಿಕೆ ನೋಡಿ ನನಗೆ ಶಾಕ್ ಆಯಿತು. ಬಹುತೇಕ ರಾಜಕಾರಣಿಗಳಿಗೆ ನಾಲಿಗೆ ಇಲ್ಲ. ಇನ್ನೂ ಕೆಲವರಿಗೆ ನಾಲ್ಕಾರು ನಾಲಿಗೆಗಳು ಇವೆ. ಒಂದೊಂದು ಕಡೆ ಹೋದಾಗ, ಒಂದೊಂದು ನಾಲಿಗೆ ಬಳಸ್ತಾರೆ ಎಂದು ಟೀಕಿಸಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ನಿರುದ್ಯೋಗ ಹಾಗೂ ಕೈಗಾರಿಕಾ ಪ್ರದೇಶಗಳನ್ನ ಅಭಿವೃದ್ಧಿ ಮಾಡದ ಶಾಸಕ ಯತ್ನಾಳ್ ಗೆ ಪತ್ರದಲ್ಲಿ ದೇವನೂರು ಮಹಾದೇವ ಚಾರ್ಜ್ ಮಾಡಿದ್ದಾರೆ. ಜನಪ್ರತಿನಿಧಿಗಳು ಹೊಣೆಗೇಡಿಗಳಾಗಿದ್ದಾರೆ ಎಂದು ಪತ್ರದಲ್ಲಿ ಕಿಡಿಕಾರಿರುವ ದೇವನೂರು ಮಹದೇವ್, ಕೊಳೆತ ಹಣ್ಣುಗಳ ಜೊತೆ ಒಳ್ಳೆಯ ಹಣ್ಣುಗಳು ಸೇರಿ ಹಾಳಾಗಬಹುದೇ..? ಎಂದು ಸುರೇಶ್ ಕುಮಾರ್ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ದೊರೆಸ್ವಾಮಿ ಅವರ ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ್ದ ಸಚಿವ ಸುರೇಶ್ ಕುಮಾರ್ ಆಡಬಾರದ ಮಾತನ್ನಾಡಿದರೆ ಕೇಳಬಾರದ ಮಾತು ಕೇಳಬೇಕಾಗುತ್ತದೆ ಎಂದು ಹೇಳಿದ್ದರು. : - - – - - -