ಮೈಸೂರು ಭಾಗದಲ್ಲಿ ಕೈಗಾರಿಕ ಬೆಳವಣಿಗೆಗೆ ಆದ್ಯತೆ: ರಮೇಶ್ ಜಾರಕಿಹೊಳಿ ರಾಜೀನಾಮೆ ಹೇಳಿಕೆ ವಿಚಾರ ಕುರಿತು ಸಚಿವ ಜಗದೀಶ್ ಶೆಟ್ಟರ್ ಪ್ರತಿಕ್ರಿಯಿಸಿದ್ದು ಹೀಗೆ… ಮೈಸೂರು,ಫೆ,23,2020(..): ಹುಬ್ಬಳಿಯಲ್ಲಿ ನಡೆಸಿದ ಇನ್ವೆಸ್ಟರ್ ಮೀಟ್ ರೀತಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಮಾಡಲಾಗುವುದು. ಮೈಸೂರು ಭಾಗದಲ್ಲಿ ಕೈಗಾರಿಕ ಬೆಳವಣಿಗೆಗೆ ಆದ್ಯತೆ ನೀಡುತ್ತೇವೆ ಎಂದು ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು. ಹುಬ್ಬಳಿಯಲ್ಲಿ ನಡೆದ ಇನ್ವೆಸ್ಟರ್ ಮೀಟ್ ವಿಚಾರ‌ ಕುರಿತು ಮೈಸೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಜಗದೀಶ್ ಶೆಟ್ಟರ್, ಇದೇ ರೀತಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಮಾಡಲಾಗುವುದು. ರಾಜ್ಯದ ಟೂ ಟೈರ್ , ತ್ರೀ ಟೈರ್ ಜಿಲ್ಲೆಗಳಲ್ಲಿ‌ ಕೈಗಾರಿಕೆ ಸ್ಥಾಪನೆಗೆ ಒತ್ತುಕೊಡಲಾಗುವುದು. ಇಂದು ಮೈಸೂರಿನಲ್ಲಿ ಕೈಗಾರಿಕೋದ್ಯಮಿಗಳು ಹಾಗೂ ಅಧಿಕಾರಿಗಳ ಸಭೆ ಕರೆದಿದ್ದೇನೆ‌. ಇಲ್ಲಿ ಬಾಕಿ ಇರುವ ಕೈಗಾರಿಕ ಸ್ಥಳಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತೇನೆ‌. ಮೈಸೂರು ಭಾಗದಲ್ಲಿ ಕೈಗಾರಿಕ ಬೆಳವಣಿಗೆಗೆ ಆದ್ಯತೆ ಕೊಡಲಾಗುವುದು ಎಂದು ತಿಳಿಸಿದರು. ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡುತ್ತೇನೆ ಎಂಬ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಜಗದೀಶ್ ಶೆಟ್ಟರ್, ರಮೇಶ್ ಜಾರಕಿಹೊಳಿ ಅವರು ಕುಮಟಳ್ಳಿ ವಿಚಾರದಲ್ಲಿ ಎಮೋಷನಲ್ ಆಗಿ‌ ಮಾತನಾಡಿದ್ದಾರೆ. ಅದು ಕೇವಲ ಪಾಸಿಂಗ್ ರಿಮಾರ್ಕ್. ಅದನ್ನು ತೀರ ಗಂಭೀರವಾಗಿ ಪರಿಗಣಿಸೋದು ಬೇಡ. ನಮ್ಮ ಮನೆಯಲ್ಲಿ ಯಾವ ಶಾಸಕರು ಪ್ರತ್ಯೇಕ ಸಭೆ ನಡೆಸಿಲ್ಲ, ಎಲ್ಲವು ವದಂತಿ ಎಂದು ಸ್ಪಷ್ಟನೆ ನೀಡಿದರು. ದೇಶ ದ್ರೋಹದ ಘೋಷಣೆ ವಿಚಾರ ಕುರಿತು ಮಾತನಾಡಿದ ಸಚಿವ ಜಗದೀಶ್ ಶೆಟ್ಟರ್, ಇಲ್ಲಿಯೇ ಅನ್ನ ತಿಂದು ಇಲ್ಲಿಯೆ ಈ ದೇಶ ದ್ರೋಹದ ಬಗ್ಗೆ ಮಾತನಾಡುತ್ತಿದ್ದಾರೆ. ಅವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಇದು ಕ್ಷಮಿಸುವ ಅಪರಾಧವಲ್ಲ. ತನಿಖೆ ಪ್ರಗತಿಯಲ್ಲಿದೆ, ರಾಜ್ಯ ಸರ್ಕಾರ ಎಲ್ಲಾ‌ ಕ್ರಮ ಕೈಗೊಂಡಿದೆ ಎಂದು ಹೇಳಿದರು. : - – --