ಸ್ಯಾಂಡಲ್ ವುಡ್ ನಿರ್ದೇಶಕ ನಾಗಶೇಖರ್ ಈಗ ತಮಿಳು ಸಿನಿಮಾದ ಹೀರೋ..! ಬೆಂಗಳೂರು, ಫೆ.20, 2020 : ( .. ) ಸ್ಯಾಂಡಲ್ ವುಡ್ ನ ನಿರ್ದೇಶಕ ನಾಗಶೇಖರ್ ತಮಿಳು ಚಿತ್ರ ಮಾಡುತ್ತಿದ್ದಾರೆ. ವಿಶೇಷ ಅಂದ್ರೆ ಈ ಚಿತ್ರದ ನಾಯಕ ನಟ ಕೂಡ ಅವರೇ. ಆ ಮೂಲಕ ತಮಿಳು ಚಿತ್ರರಂಗದಲ್ಲಿ ಅದೃಷ್ಠ ಪರೀಕ್ಷೆಗೆ ಮುಂದಾಗಿದ್ದಾರೆ. ಆರಂಭದಲ್ಲಿ ಕನ್ನಡ ಸಿನಿಮಾಗಳಲ್ಲಿ ಹಾಸ್ಯ ನಟನಾಗಿ ಗುರುತಿಸಿಕೊಂಡಿದ್ದ ನಾಗಶೇಖರ್, ಬಳಿಕ ಚಿತ್ರ ನಿರ್ದೇಶನದ ಮೂಲಕವೂ ಗಮನ ಸೆಳೆದಿದ್ದರು. ಇವರ ನಿರ್ದೇಶನದಲ್ಲಿ ಮೂಡಿ ಬಂದ ಕೆಲ ಚಿತ್ರಗಳು ಗಲ್ಲಾ ಪೆಟ್ಟಿಗೆಯಲ್ಲಿ ಯಶಸ್ಸು ಸಹ ಕಂಡಿವೆ. ಆದರೆ ಇತ್ತೀಚಿಗೆ ಕೆಲ ಸಮಯದಿಂದ ನೇಪಥ್ಯಕ್ಕೆ ಸರಿದಿದ್ದ ನಾಗಶೇಖರ್, ಇದೀಗ ತಮಿಳು ಸಿನಿಮಾದಲ್ಲಿ ನಟಿಸಿ, ನಿರ್ದೇಶನ ಮಾಡುವ ಮೂಲಕ ಕಮ್ ಬ್ಯಾಕ್ ಆಗಿದ್ದಾರೆ. ತಮಿಳಿನ ಸ್ಟಾರ್ ನಿರ್ದೇಶಕರಾದ ಭಾಗ್ಯರಾಜ್, ಭಾರತೀರಾಜರಂಥ ಗಣ್ಯರು ಈ ಸಿನಿಮಾದ ಮುಹೂರ್ತ ಸಮಾರಂಭದಲ್ಲಿ ಹಾಜರಿದ್ದು ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ನಾಗಶೇಖರ್ ನಟಿಸಿ, ನಿರ್ದೇಶಿಸುತ್ತಿರುವ ಈ ಚಿತ್ರದ ಹೆಸರು ( ‘ನವೆಂಬರ್ ಮಳೆಯಲ್ಲಿ ನಾನು- ಅವಳು )ಈ ಚಿತ್ರದ ಚಿತ್ರೀಕರಣಕ್ಕಾಗಿ ಸಿನಿತಂಡ ಕಳೆದ ಒಂದು ತಿಂಗಳಿನಿಂದಲೂ ಪಾಂಡಿಚೇರಿಯಲ್ಲಿ ಬೀಡು ಬಿಟ್ಟಿದೆ. ಸ್ಯಾಂಡಲ್ ವುಡ್ ನ ಸತ್ಯ ಹೆಗಡೆ ಈ ಚಿತ್ರದ ಛಾಯಾಗ್ರಾಹಕರು. ಪಾಂಡಿಚೇರಿಯ ಪ್ಯಾರಡೈಸ್ ಬೀಚ್ ನಲ್ಲಿ ನಡೆಯುತ್ತಿದ್ದ ಚಿತ್ರೀಕರಣ ಸ್ಥಳಕ್ಕೆ ಇತ್ತೀಚೆಗೆ ಕನ್ನಡದ ಮತ್ತೋರ್ವ ಪ್ರತಿಭಾವಂತ ನಿರ್ದೇಶಕಿ, ಸುಮನಾ ಕಿತ್ತೂರು ಭೇಟಿ ನೀಡಿ ತಂಡಕ್ಕೆ ಶುಭ ಕೋರಿದ್ದಾರೆ. : -------