ನಾಳೆ ನಾಡಿನೆಲ್ಲಡೆ ಶಿವರಾತ್ರಿ ಸಂಭ್ರಮ: ಮೈಸೂರಿನಲ್ಲಿ ಸಿದ್ಧತಾ ಕಾರ್ಯ ಜೋರು: ಐತಿಹಾಸಿಕ ಚಿನ್ನದ ಕೊಳಗ ಹಸ್ತಾಂತರ.. ಮೈಸೂರು,ಫೆ,20,2020(..): ನಾಳೆ ನಾಡಿನೆಲ್ಲಡೆ ಶಿವರಾತ್ರಿ ಹಬ್ಬ ಸಂಭ್ರಮ ಮನೆ ಮಾಡಲಿದ್ದು, ಶಿವನಾಮ ಸ್ಮರಣೆಗೆ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗಿದೆ. ಮೈಸೂರಿನಲ್ಲಿ ಶಿವರಾತ್ರಿ ಹಬ್ಬಕ್ಕೆ ಸಿದ್ಧತಾ ಕಾರ್ಯ ಜೋರಾಗಿದ್ದು, ಐತಿಹಾಸಿಕ ಚಿನ್ನದ ಕೊಳಗ ಹಸ್ತಾಂತರವನ್ನ ಜಿಲ್ಲಾಡಳಿತ, ಮುಜರಾಯಿ ಇಲಾಖೆ ಅರ್ಚಕರಿಗೆ ಹಸ್ತಾಂತರ ಮಾಡಿದರು. ಬರೋಬ್ಬರಿ 11 ಕೆ.ಜಿ‌ ತೂಕದ ಅಪರಂಜಿ ಚಿನ್ನದ ಶಿವನ ಮುಖವಾಡವನ್ನ ಶಿವರಾತ್ರಿ ಮುನ್ನ ದಿನ ಖಜಾನೆಯಿಂದ ತೆಗೆದು ದೇವಾಲಯಕ್ಕೆ ಹಸ್ತಾಂತರ ಮಾಡಲಾಗುತ್ತದೆ. ಶಿವರಾತ್ರಿ ದಿನ ಮೈಸೂರು ಅರಮನೆ ಆವರಣದಲ್ಲಿರುವ ಶ್ರೀ ತ್ರಿನೇಶ್ವರ ದೇವಾಲಯದ ಶಿವಲಿಂಗಕ್ಕೆ ಮುಖವಾಡ ಧಾರಣೆ ಮಾಡಿ ಸಾರ್ವಜನಿಕರ ದರ್ಶನದ ಬಳಿಕ ವಾಪಸ್ ಖಜಾನೆಯಲ್ಲಿ ಸಂರಕ್ಷಿಸಲಾಗುತ್ತದೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಹುಟ್ಟಿದ ಸಂಭ್ರಮಕ್ಕಾಗಿ ಈ ಅಪರಂಜಿ ಕೊಳಗವನ್ನ ಮೈಸೂರು ಮಹಾರಾಜ ಜಯಚಾಮರಾಜ ಒಡೆಯರ್ ನೀಡಿದ್ದರು. ವರ್ಷಪೂರ್ತಿ ಈ ಕೊಳಗ ಜಿಲ್ಲಾ ಖಜಾನೆಯಲ್ಲಿರುತ್ತದೆ. ಈ ನಡುವೆ ನಾಳೆ ಶಿವರಾತ್ರಿ ಹಬ್ಬ ಹಿನ್ನೆಲೆ ಜಿಲ್ಲಾಡಳಿತ ಐತಿಹಾಸಿಕ ಚಿನ್ನದ ಕೊಳಗ ಹಸ್ತಾಂತರವನ್ನ ದೇವಾಲಯಕ್ಕೆ ಹಸ್ತಾಂತರ ಮಾಡಿದೆ. ಈ ವೇಳೆ ಅಪರ ಜಿಲ್ಲಾಧಿಕಾರಿ ಪೂರ್ಣಿಮಾ, ಮುಜರಾಯಿ ತಹಸೀಲ್ದಾರ್ ಯತಿರಾಜ್, ಅರಮನೆ ದೇವಾಲಯಗಳ ಕಾರ್ಯನಿರ್ವಹಣಾ ಅಧಿಕಾರಿ ಗೋವಿಂದರಾಜು, ತ್ರಿನೇಶ್ವರ ದೇವಾಲಯದ ಪ್ರಧಾನ ಅರ್ಚಕ ಸಂತಾನಂ, ಚಾಮುಂಡಿ ಬೆಟ್ಟದ ಪ್ರಧಾನ ಅರ್ಚಕ ಡಾ.ಶಶಿಶೇಖರ್ ದೀಕ್ಷಿತ್ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು. ಶಿವರಾತ್ರಿ ಹಬ್ಬಕ್ಕಾಗಿ ನಗರದ ಪ್ರಸಿದ್ದ ದೇವಾಲಯ ಗುರುಕುಲದಲ್ಲಿ ಸುಚಿತ್ವ ಕಾರ್ಯ ನಡೆಯುತ್ತಿದೆ . 101ಲಿಂಗಗಳು ಪ್ರತಿಷ್ಠಾಪನೆಯಾಗಿರುವ ಗುರುಕುಲವನ್ನ ಜಯಚಾಮರಾಜೇಂದ್ರ ಒಡೆಯರ್ ಉದ್ಘಾಟಿಸಿದ್ದರು. ವರ್ಷಕ್ಕೊಮ್ಮೆ ಮಹಾಶಿವರಾತ್ರಿ ದಿನದಂದು ಈ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಗುರುಕುಲದ ಅವರಣದಲ್ಲಿ ವಿವಿಧ ಧಾರ್ಮಿಕ ಕಾರ್ಯ ನಡೆಯಲಿದ್ದು , ಹೀಗಾಗಿ ಅರ್ಚಕರು ಶಿವಲಿಂಗಗಳನ್ನು ಸ್ವಚ್ಚತೆ ಗೊಳಿಸುತ್ತಿದ್ದಾರೆ. ನಾಳೆ ಬೆಳ್ಳಿಗ್ಗೆ 8 ರಿಂದ ದರ್ಶನ ವ್ಯವಸ್ಥೆ ಮಾಡಲಾಗಿದ್ದು ರಾತ್ರಿ ಇಡೀ ವಿವಿಧ ಧಾರ್ಮಿಕ ಕೈಂಕರ್ಯ ನೆರವೇರಲಿದೆ. : - – -