ರಾಜ್ಯ ಸರ್ಕಾರ ಮೈಸೂರಿನ ರೇಸ್ ಕೋರ್ಸ್ ಗುತ್ತಿಗೆ ನವೀಕರಿಸಿರುವುದು ಸರಿಯಲ್ಲ-ಮಾಜಿ ಸಚಿವ ಸಾ.ರಾ ಮಹೇಶ್ ಅಸಮಾಧಾನ… ಮೈಸೂರು,ಜ,15,2020(..): ಮೈಸೂರಿನ ರೇಸ್ ಕೋರ್ಸ್ ಗುತ್ತಿಗೆಯನ್ನು ಮತ್ತೆ 30 ವರ್ಷಗಳವರೆಗೆ ನವೀಕರಣ ಮಾಡಿರುವ ರಾಜ್ಯ ಸರ್ಕಾರದ ನಿಲುವಿಗೆ ಮಾಜಿ ಸಚಿವ ಸಾ.ರಾ ಮಹೇಶ್ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಸಾರಾ ಮಹೇಶ್ , ನಮ್ಮ ಸರ್ಕಾರದ ಅವಧಿಯಲ್ಲಿ ರೇಸ್ ಕೋರ್ಸ್ ಗುತ್ತಿಗೆಯನ್ನು ನವೀಕರಿಸದಂತೆ ನಿರ್ಣಯ ಕೈಗೊಳ್ಳಲಾಗಿತ್ತು. ಮೈಸೂರು ನಗರದ ಅಭಿವೃದ್ಧಿ ದೃಷ್ಟಿಯಿಂದ ರೇಸ್ ಕೋರ್ಸ್ ಸ್ಥಳಾಂತರ ಮಾಡಲು ನಿರ್ಧರಿಸಲಾಗಿತ್ತು. ಆಗ ನಮ್ಮ ಸರ್ಕಾರ ಯಾವುದೇ ಒತ್ತಡಗಳಿಗೆ ಮಣಿದಿರಲಿಲ್ಲ. ನಮಗೆ ರೇಸ್ ಕೋರ್ಸನ್ನು ಮೈಸೂರಿನಿಂದ ಹೊರವಲಯಕ್ಕೆ ಸ್ಥಳಾಂತರಿಸುವ ಉದ್ದೇಶವಿತ್ತು. ಆದರೆ ಇದೀಗ ರಾಜ್ಯ ಸರ್ಕಾರ ರೇಸ್ ಕೋರ್ಸ್ ಗುತ್ತಿಗೆಯನ್ನು ನವೀಕರಿಸಿರುವುದು ಸರಿಯಲ್ಲ ಎಂದರು. ರೇಸ್ ಕೋರ್ಸ್ ನಲ್ಲಿ 600ಕ್ಕೂ ಹೆಚ್ಚು ಶೆಡ್ ಗಳಿವೆ. ಅಲ್ಲಿ 1,500 ಕ್ಕೂ ಹೆಚ್ಚು ಮಂದಿ ಅನಧಿಕೃತವಾಗಿ ವಾಸಿಸುತ್ತಿದ್ದಾರೆ. ಹಾಗಾಗಿ ಸರ್ಕಾರ ರೇಸ್ ಕೋರ್ಸ್ ಗುತ್ತಿಗೆ ನವೀಕರಿಸಬಾರದಿತ್ತು. ಸರ್ಕಾರ ನೀಡಿದ್ದ ಆದೇಶ ಪ್ರಶ್ನಿಸಿ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದವರಿಗೆ ಮತ್ತೆ ಪರವಾನಗಿ ನೀಡಿರುವುದರ ಷಡ್ಯಂತ್ರದ ಹಿಂದೆ ಯಾರ ಕೈವಾಡವಿದೆ. ಸರ್ಕಾರ ಯಾರ ಒತ್ತಡಕ್ಕೆ ಮಣಿದಿದೆ ಎಂಬುದನ್ನು ಮುಂಬರುವ ವಿಧಾನಮಂಡಲದ ಅಧಿವೇಶನದಲ್ಲಿ ಪ್ರಶ್ನೆ ಮಾಡುತ್ತೇನೆ ಎಂದು ಸಾರಾ ಮಹೇಶ್ ಹೇಳಿದರು. : – – - –- -