ಡೈರಿಗೆ ಹಾಲು ಹಾಕಲು ತೆರಳುತ್ತಿದ್ದ ರೈತನ ಮೇಲೆ ಕಾಡಾನೆ ಏಕಾಏಕಿ ದಾಳಿ… ಮೈಸೂರು,ಡಿ,7,2019(..): ಡೈರಿಗೆ ಹಾಲು ಹಾಕಲು ತೆರಳುತ್ತಿದ್ದ ರೈತನ ಮೇಲೆ ಕಾಡಾನೆ ಹಠಾತ್ ದಾಳಿ ನಡೆಸಿದ್ದು ಸದ್ಯ ರೈತ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಮೈಸೂರು ಜಿಲ್ಲೆ ಹೆಚ್.ಡಿ ಕೋಟೆ ತಾಲ್ಲೂಕಿನಲ್ಲಿ ನಡೆದಿದೆ. ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ಸರಗೂರು ತಾಲೂಕಿನ ಕಲ್ಲಂಬಾಳು ಗ್ರಾಮದಲ್ಲಿ ಈ ಘಟನೆ ನಡೆದಿದೆ. 68 ವರ್ಷದ ರಾಮಯ್ಯ ಎಂಬುವರ ಮೇಲೆ ದಾಳಿ ನಡೆಸಿದ ಕಾಡಾನೆ. ಆನೆ ದಾಳಿಯಿಂದ ರೈತ ರಾಮಯ್ಯಗೆ ಸಣ್ಣಪುಟ್ಟ ಗಾಯಗಳಾಗಿವೆ. ರಾಮಯ್ಯ ಆಶ್ಚರ್ಯಕರ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಾಮಯ್ಯ ಗ್ರಾಮಸ್ಥರ ಜೊತೆ ಎಂದಿನಂತೆ ಹಾಲಿನ ಡೈರಿಗೆ ಹಾಲು ಹಾಕಲು ತೆರಳುತ್ತಿದ್ದರು. ಈ ವೇಳೆ ಎದುರಾದ ಕಾಡಾನೆಯೊಂದು ರಾಮಯ್ಯನವರ ಮೇಲೆ ಏಕಾಏಕಿ ದಾಳಿ ನಡೆಸಿದೆ. ಈ ಸಂದರ್ಭದಲ್ಲಿ ಗಾಯಗೊಂಡ ರಾಮಯ್ಯರ ಕೂಗಾಟ ಕೇಳಿ ಸ್ಥಳಕ್ಕೆ ಜನರು ಓಡಿ ಬಂದಿದ್ದಾರೆ. ಈ ಸಮಯದಲ್ಲಿ ಜನರ ಕೂಗಾಟ ಕೇಳಿ ಆನೆ ಸ್ಥಳದಿಂದ ಓಡಿ ಹೋಗಿದ್ದು, ಗಾಯಗೊಂಡಿರುವ ರಾಮಯ್ಯಗೆ ಎಚ್. ಡಿ. ಕೋಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಲ್ಲಂಬಾಳು ಗ್ರಾಮದ ಹೊರವಲಯದ ಜಮೀನಿನಲ್ಲಿ ಕಾಡಾನೆಗಳ ಹಿಂಡು ಬೀಡುಬಿಟ್ಟಿದ್ದು, ಸುದ್ದಿ ತಿಳಿದರೂ ಘಟನಾ ಸ್ಥಳಕ್ಕೆ ಆಗಮಿಸದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ದ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ. : -- – - – .