ಗುಂಡೇಟಿಗೆ ಮೃತಪಟ್ಟ ಮೈಸೂರು ಯುವಕ: ಅಮೇರಿಕಾದಲ್ಲೇ ಅಂತ್ಯಸಂಸ್ಕಾರಕ್ಕೆ ಮುಂದಾದ ಪೋಷಕರು… ಮೈಸೂರು,ನ,29,2019(..): ಅಮೇರಿಕಾದಲ್ಲಿ ಎಂ ಎಸ್ ಮಾಡುತ್ತಿದ್ದ ಮೈಸೂರು ಯುವಕನೋರ್ವ ಅಪರಿಚಿತ ವ್ಯಕ್ತಿಯ ಗುಂಡಿಗೆ ಬಲಿಯಾಗಿರುವ ಘಟನೆ ನಡೆದಿದೆ. ಮೈಸೂರಿನ ಕುವೆಂಪುನಗರದ ಪಿ ಅಂಡ್ ಎಫ್ ಬ್ಲಾಕ್ ಮನುಜ ಪಥ ರೋಡ್ ನಲ್ಲಿ ವಾಸವಿರುವ ಸುರೇಶ್ ಚಂದ್ ಅವರ ಪುತ್ರ ಅಭಿಷೇಕ್(25) ಮೃತಪಟ್ಟ ಯುವಕ. ಅಭಿಷೇಕ್ ಮೈಸೂರಿನ ವಿದ್ಯ ವಿಕಾಸ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಮಾಡಿದ್ದರು. ಬಳಿಕ ಎಂಎಸ್ ಮಾಡಲು ಒಂದುವರೆ ವರ್ಷದ ಹಿಂದೆಯೇ ಅಮೇರಿಕಾಗೆ ತೆರಳಿದ್ದರು. ಅಲ್ಲಿನ ಸ್ಯಾನ್ ಬರ್ನಾಡಿಯೋದಲ್ಲಿರುವ ಕ್ಯಾಲಿಫೋರ್ನಿಯಾ ವಿಶ್ವ ವಿದ್ಯಾನಿಲಯದಲ್ಲಿ ಎಂಎಸ್ ವ್ಯಾಸಂಗ ಮಾಡುತ್ತಿದ್ದರು. ವ್ಯಾಸಂಗದ ಅವಧಿಯ ಬಿಡುವಿನ ವೇಳೆ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಅಭಿಷೇಕ್ ರೆಸಿಡೆಂಟ್ ವೊಂದರಲ್ಲಿ ಉಳಿದುಕೊಂಡಿದ್ದರು. ಈ ಮಧ್ಯೆ ನಿನ್ನೆ ಕ್ಯಾಲಿಫೋರ್ನಿಯಾದಲ್ಲಿ ಅಭಿಷೇಕ್ ಅಪರಿಚಿತ ವ್ಯಕ್ತಿಯ ಗುಂಡೇಟಿಗೆ ಬಲಿಯಾಗಿದ್ದಾರೆ. ಇನ್ನು ಅಮೇರಿಕಾದಲ್ಲಿ ಪೊಲೀಸರು ಪರಿಶೀಲಿಸಿದ್ದು ಮೃತದೇಹ ಆಸ್ಪತ್ರೆಗೆ ರವಾನಿಸಲಾಗಿದೆ ಎನ್ನಲಾಗಿದೆ. ಇತ್ತ ಮೈಸೂರಿನಲ್ಲಿರುವ ಅಭಿಷೇಕ್ ಪೋಷಕರು ಆತಂಕಕ್ಕೀಡಾಗಿದ್ದಾರೆ. ಮೃತ ಅಭಿಷೇಕ್ ಅಂತ್ಯಕ್ರಿಯೆಯನ್ನ ಅಮೇರಿಕಾದಲ್ಲೇ ಮಾಡಲು ಅಭಿಷೇಕ್ ಪೋಷಕರು ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. : - –- - –