ಹುಣಸೂರು ಉಪಚುನಾವಣೆ ವೇಳೆಯಲ್ಲೂ ಗ್ರಾಮಕ್ಕಿಲ್ಲ ಕುಡಿಯುವ ನೀರಿನ ಭಾಗ್ಯ: ಖಾಲಿ ಕೊಡ ಪ್ರದರ್ಶಿಸಿ ಗ್ರಾಮಸ್ಥರ ಆಕ್ರೋಶ… ಮೈಸೂರು,ನ,12,2019(..): ಒಂದೆಡೆ ಹುಣಸೂರು ಉಪಚುನಾವಣೆಗೆ ಮೂರು ಪಕ್ಷಗಳ ರಾಜಕೀಯ ನಾಯಕರು ಸಜ್ಜಾಗುತ್ತಿದ್ದರೇ ಇತ್ತ ಅದೇ ಕ್ಷೇತ್ರದ ಒಂಟೇಪಾಳೇ ಬೋರೆ ಗ್ರಾಮದಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ. ಹುಣಸೂರು ಉಪಚುನಾವಣೆ ವೇಳೆಯಲ್ಲೂ ಕೂಡ ಈ ಗ್ರಾಮದ ಜನರಿಗೆ ಕುಡಿಯುವ ನೀರಿನ ಭಾಗ್ಯ ಲಭಿಸಿಲ್ಲ. ರಾಜಕೀಯ ನಾಯಕರು ಹುಣಸೂರು ಉಪಚುನಾವಣೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಆದರೆ ಹುಣಸೂರು ಪಟ್ಟಣಕ್ಕೆ ಕೂಗಳತೆ ದೂರದಲ್ಲಿರುವ ಒಂಟೇಪಾಳೇ ಬೋರೆ ಗ್ರಾಮದಲ್ಲಿ ಜನರು ಕಳೆದ ಒಂದು ವರ್ಷದಿಂದಲೂ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ಹುಣಸೂರಿನಲ್ಲಿ ನೆರೆಪ್ರವಾಹ ಉಂಟಾದರೂ ಇವರಿಗೆ ಮಾತ್ರ ಕುಡಿಯಲು ನೀರಿಲ್ಲ. ವಾಲ್ ಮೆನ್ ಹಾಗೂ ಸೂಪರ್ ವೈಸರ್ ಇಬ್ಬರ ನಡುವಿನ ಮನಸ್ತಾಪದ ಎಫೆಕ್ಟ್ ನಿಂದಾಗಿ ಈ ಗ್ರಾಮದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ ಎನ್ನಲಾಗುತ್ತಿದೆ. ಇನ್ನು ವಾಲ್ ಮೆನ್ ಹಾಗೂ ಸೂಪರ್ ವೈಸರ್ ರನ್ನು ಸ್ಥಳೀಯರು ತರಾಟೆ ತೆಗೆದುಕೊಂಡಿದ್ದಾರೆ. ಈ ವೇಳೆ ಒಬ್ಬರ ಮೇಲೊಬ್ಬರು ದೋಷಾರೋಪಣೆ ಮಾಡುವ ಮೂಲಕ ಗ್ರಾಮಸ್ಥರ ಮುಂದೆ ವಾಲ್ ಮೆನ್ ಹಾಗೂ ಸೂಪರ್ ವೈಸರ್ ಹೈ ಡ್ರಾಮ ಮಾಡಿದ್ದಾರೆ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಖಾಲಿ ಕೊಡಗಳನ್ನು ಪ್ರದರ್ಶಿಸಿ ಜನಪ್ರತಿನಿಧಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಅಧಿಕಾರಿಗಳೇ ಎಲ್ಲಿದ್ದೀರಾ ? ಎಂದು ಪ್ರಶ್ನಿಸಿದ್ದಾರೆ. : -- - -