ಹೆಚ್.ಡಿ ದೇವೇಗೌಡರ ಕುಟುಂಬ ಎಂಬ ಕಾರಣಕ್ಕೆ ಡಾ.ಮಂಜುನಾಥ್ ಅವರ ಬಗ್ಗೆ ತನಿಖೆ – ಕೋಟ ಶ್ರೀನಿವಾಸ್ ಪೂಜಾರಿ. ಮಂಗಳೂರು, ಫೆಬ್ರವರಿ,27,2024(..):ಹೆಚ್.ಡಿ ದೇವೇಗೌಡರ ಕುಟುಂಬ ಎಂಬ ಕಾರಣಕ್ಕೆ ಡಾ .ಸಿಎನ್ ಮಂಜುನಾಥ್ ಅವರ ಬಗ್ಗೆ ತನಿಖೆ ಮಾಡಲು ಸಿದ್ದರಾಮಯ್ಯ ಸರ್ಕಾರ ಮುಂದಾಗಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಆರೋಪ ಮಾಡಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ಕೋಟ ಶ್ರೀನಿವಾಸ ಪೂಜಾರಿ, 15 ವರ್ಷಗಳ ಕಾಲ ಬಡವರಿಗಾಗಿ ತಮ್ಮ ಬದುಕನ್ನು ಸಮರ್ಪಣೆ ಮಾಡಿದವರು ಡಾ.ಮಂಜುನಾಥ್. ಆದರೆ ಅವರ ಬಗ್ಗೆ ತನಿಖೆ ಮಾಡುವ ಕುಕೃತ್ಯಕ್ಕೆ‌ ಸಿದ್ದರಾಮಯ್ಯ ಸರ್ಕಾರ ಮುಂದಾಗಿದೆ. ರಾಜಕಾರಣವನ್ನು ಯಾವ ಮಟ್ಟಕ್ಕೆ ತೆಗೆದುಕೊಂಡು ಹೋಗ್ತಿದ್ದಾರೆ ಎಂಬುದಕ್ಕೆ ಇದೊಂದು ದೃಷ್ಟಾಂತ ಎಂದು ಹರಿಹಾಯ್ದರು. ಸಂವಿಧಾನ ಉಳಿಸಬೇಕೆಂದು ಸಿದ್ದರಾಮಯ್ಯನವರು ಕೋಟ್ಯಾಂತರ ಖರ್ಚು ಮಾಡಿ ಬೆಂಗಳೂರಿನಲ್ಲಿ ಸಮಾವೇಶ ಮಾಡಿದ್ರು. ದುರಾದೃಷ್ಟಕ್ಕೆ ಸಂವಿಧಾನ ಉಳಿಸಿ ಎಂಬ ಕಾರ್ಯಕ್ರಮವನ್ನು ಕಾಂಗ್ರೆಸ್ ಕಾರ್ಯಕ್ರಮವಾಗಿ ಪರಿವರ್ತನೆ ಮಾಡಿದ್ದಾರೆ. ಪ್ರಧಾನಿ‌ ನರೇಂದ್ರ ಮೋದಿಯನ್ನು‌ ನಿಂಧಿಸುವ ಕೃತ್ಯಕ್ಕೆ ಸಿಎಂ ಸಿದ್ದರಾಮಯ್ಯ ಇಳಿದಿದ್ದಾರೆ. ಕೇಂದ್ರ ಸರ್ಕಾರವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು, ಪ್ರಧಾನಿಯವರನ್ನು ದೂಷಣೆ ಮಾಡಲು ಖರ್ಚು ಮಾಡಿದ್ದಾರೆ ಎಂದು ಕೋಟ ಶ್ರೀನಿವಾಸ್ ಪೂಜಾರಿ ವಾಗ್ದಾಳಿ ನಡೆಸಿದರು. : -. - ’ - –