ಗ್ರಾ.ಪಂ ವ್ಯಾಪ್ತಿಯಲ್ಲಿ ಪ್ರಗತಿ ಕುಂಠಿತ: ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಸಿಇಓ ಜ್ಯೋತಿ ಅವರಿಂದ ತರಾಟೆ: ಕಠಿಣ ಕ್ರಮದ ಎಚ್ಚರಿಕೆ…. ಮೈಸೂರು,ಅ,22,2019(..): ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಗತಿ ಕುಂಠಿತವಾಗಿರುವುದಕ್ಕೆ ಬೇಸರ ವ್ಯಕ್ತಪಡಿಸಿದ ಮೈಸೂರು ಜಿಲ್ಲಾ ಪಂಚಾಯತ್ ಸಿಇಓ ಜ್ಯೋತಿ ಅವರು ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡ ಪ್ರಸಂಗ ನಡೆಯಿತು. ಮೈಸೂರು ಜಿಲ್ಲಾ ಪಂಚಾಯತ್ ನ ಸಭಾಂಗಣದಲ್ಲಿ ಜುಲೈ, ಆಗಸ್ಟ್, ಸೆಪ್ಟೆಂಬರ್ ಮಾಹೆಯ ಪ್ರಗತಿ ಪರಿಶೀಲನೆ ಸಭೆ ನಡೆಯಿತು. ಜಿ.ಪಂ ಅಧ್ಯಕ್ಷೆ ಪರಿಮಳಾ ಶ್ಯಾಮ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿ.ಪಂ ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್, ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಸಾ.ರಾ ನಂದೀಶ್ , ವೆಂಕಟೇಶ್ ಮತ್ತು ಸಿಇಓ ಕೆ ಜ್ಯೋತಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದರು. ಸರ್ಕಾರಿ ಅಧಿಕಾರಿಗಳ ನಡೆಗೆ ಸಭೆಯಲ್ಲಿ ಬೇಸರ ವ್ಯಕ್ತಪಡಿಸಿದ ಜಿ.ಪಂ ಸಿಇಓ ಜ್ಯೋತಿ ಅವರು, ಪ್ರಗತಿ ಕಾಣದ ಗ್ರಾ.ಪಂ ಪಿಡಿಓಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಅಧ್ಯಕ್ಷರ ಅನುಮತಿ ಕೇಳಿದರು. ಪಿಡಿಓಗಳ ಮೇಲೆ ಕಠಿಣ ಕ್ರಮಕ್ಕೆ ಸಭೆಯಲ್ಲಿ ವಿಚಾರ ಮಂಡಿಸಿದರು. ಇಓಗಳ ಮೇಲೆಯೂ ಕಠಿಣ ಕ್ರಮಕ್ಕೆ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಎಂದು ಸಿಇಓ ಜ್ಯೋತಿ ಅವರು ಸಭೆಯಲ್ಲಿ ತಿಳಿಸಿದರು. ಪಿಡಿಓಗಳು ಸರ್ಕಾರಿ ಯೋಜನೆಗಳನ್ನ ಜನರಿಗೆ ತಲುಪಿಸಲು ವಿಫಲವಾಗಿದ್ದಾರೆ. ಜನರಿಗೆ ಸೂಕ್ತ ರೀತಿಯಲ್ಲಿ ಸವಲತ್ತುಗಳನ್ನು ನೀಡುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ. ಇದು ಮೇಲಾಧಿಕಾರಿಗಳಾದ ಇಓಗಳ ಬೇಜವಾಬ್ದಾರಿಯನ್ನು ತೋರಿಸುತ್ತಿದೆ. ಕೆಲವೊಂದು ಗ್ರಾ.ಪಂ ನಲ್ಲಿ ಪ್ರಗತಿಗಳು ಇನ್ನೂ ಶೇಕಡಾವಾರು ೧೦% ರಷ್ಟು ದಾಟಿಲ್ಲ. ಇದು ನಮ್ಮ ಅಧಿಕಾರಿಗಳ ಕಾರ್ಯ ವೈಖರಿಯನ್ನು ತೋರಿಸಿದೆ. ಈ ರೀತಿಯಲ್ಲಿ ಪ್ರಗತಿಯಲ್ಲಿ ಕುಂಠಿತಗೊಂಡ ಪಿಡಿಓಗಳ ಮೇಲೆ ಜಿ.ಪಂ‌ ನಿಂದ ಯಾವ ರೀತಿ ಕ್ರಮ ಕೈಗೊಳ್ಳಬೇಕು ಅದನ್ನು ಕೈಗೊಳ್ಳಲಿದೆ ಎಂದು ಸಿಇಓ ಜ್ಯೋತಿ ತಿಳಿಸಿದರು. ಪ್ರತಿ ಬಾರಿ ಸಭೆ ಮಾಡಿದಾಗಲು ಪ್ರಗತಿ ಬಗ್ಗೆ ಒತ್ತು ನೀಡುವಂತೆ ಸೂಚನೆ ನೀಡಿದ್ದೇವೆ. ಆದ್ರೇ ನಮ್ಮ ಅಧಿಕಾರಿಗಳು ಬೇಜವಾಬ್ದಾರಿ ತೋರುತ್ತಿದ್ದಾರೆ. ನಮ್ಮ ಕೆಲಸಗಳಿಂದ ಜನರಿಗೆ ಸರ್ಕಾರದ ಸವಲತ್ತುಗಳನ್ನು ಜನರಿಗೆ ತಲುಪಿಸಬೇಕಿತ್ತು. ನರೇಗಾ ಮೂಲಕ ಎಲ್ಲಾ ಸವಲತ್ತುಗಳನ್ನು ತಲುಪಿಸಲು ಸರ್ಕಾರ ನಮ್ಮನ್ನು ನೇಮಕ ಮಾಡಿದೆ. ಆದ್ರೇ ಇಲ್ಲಿ ನೀವು ಏನು ಮಾಡದೇ ಸುಮ್ಮನೆ ಕೂತಿರುವುದು ಬೇಸರ ಮೂಡಿಸುತ್ತಿದೆ. ಇನ್ನೂ ಹತ್ತು ದಿನಗಳ ಒಳಗೆ ಪ್ರಗತಿ ಏರಿಕೆಯಾಗಬೇಕು. ಇಲ್ಲವಾದಲ್ಲಿ ಪಿಡಿಓ ಮತ್ತು ಇಓಗಳ ಮೇಲೆ ಮುಲಾಜಿಲ್ಲದೇ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. : - – -- - .