ಚಾಮರಾಜನಗರ ಲೋಕಸಭಾ ಕ್ಷೇತ್ರ: ಬಿಜೆಪಿಗೆ ತಲೆನೋವು ತಂದಿಟ್ಟ ಒಂದೇ ಮನೆಯ ಇಬ್ಬರ ಟಿಕೆಟ್ ಫೈಟ್. ಚಾಮರಾಜನಗರ,ಫೆಬ್ರವರಿ,23,2024(..):ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು ಈ ಮಧ್ಯೆ ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಒಂದೇ ಮನೆಯಲ್ಲಿ ಇಬ್ಬಿಬ್ಬರು ಆಕಾಂಕ್ಷಿಗಳಿದ್ದು ಬಿಜೆಪಿಗೆ ತಲೆನೋವು ತಂದಿಟ್ಟಿದೆ. ಹಾಲಿ ಸಂಸದ ಶ್ರೀನಿವಾಸ್ ಪ್ರಸಾದ್ ಅಳಿಯರಿಬ್ಬರಿಂದ ಚಾಮರಾಜನಗರ ಕ್ಷೇತ್ರದ ಟಿಕೆಟ್ ಗಾಗಿ ಫೈಟ್ ಶುರುವಾಗಿದೆ. ಡಾ.ಮೋಹನ್ ಮತ್ತು ಮಾಜಿ ಶಾಸಕ‌ ಹರ್ಷವರ್ಧನ್ ಇಬ್ಬರು ಸಹ ಬಿಜೆಪಿ ಟಿಕೆಟ್ ಗಾಗಿ ಲಾಬಿ ನಡೆಸುತ್ತಿದ್ದಾರೆ. ಷಡ್ಕರ ಟಿಕೆಟ್ ಗುದ್ದಾಟ ಬಿಜೆಪಿ ವರಿಷ್ಠರಿಗೆ ತಲೆನೋವು ತಂದಿದೆ. ಈಗಾಗಲೇ ಸಂಸದ ಶ್ರೀನಿವಾಸ್ ಪ್ರಸಾದ್ ನಿವಾಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಭೇಟಿ ನೀಡಿ ಆಂತರಿಕವಾಗಿ ಸಮಸ್ಯೆ ಬಗೆಹರಿಸಕೊಳ್ಳಲು ಯತ್ನಿಸಿದ್ದಾರೆ. ಈ ಮಧ್ಯೆ ಹಾಲಿ ಸಂಸದ ಶ್ರೀನಿವಾಸ್ ಪ್ರಸಾದ್ ಈಗಾಗಲೇ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದು, ಮಾರ್ಚ್ 17 ಕ್ಕೆ ರಾಜಕೀಯ ಜೀವನದ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿದ್ದಾರೆ. ಇತ್ತ ಆ ಸ್ಥಾನಕ್ಕೆ ಅಳಿಯಂದಿರಲ್ಲಿ ಪೈಪೋಟಿ ಶುರುವಾಗಿದೆ. ಹಳೆ ಮೈಸೂರು ಭಾಗ ಕಬ್ಜ ಮಾಡುವ ಯತ್ನದಲ್ಲಿರುವ ಬಿಜೆಪಿಗೆ ಒಂದೇ ಮನೆಯ ಇಬ್ಬರ ಟಿಕೆಟ್ ಕದನ ತಲೆನೋವು ತಂದಿಟ್ಟಿದೆ. ಹೀಗಾಗಿ ಇಬ್ಬರ ಜಗಳದಲ್ಲಿ ಮೂರನೇ ವ್ಯಕ್ತಿಗೆ ಆಗುತ್ತಾ ಲಾಭ.? ಎಂಬುದನ್ನ ಕಾದು ನೋಡಬೇಕಿದೆ. ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಮಾಜಿ ಶಾಸಕ ಬಾಲರಾಜ್, ಮಾಜಿ ಸಚಿವ ಎನ್ ಮಹೇಶ್ ಸೇರಿದಂತೆ ಆಕಾಂಕ್ಷಿಗಳ ದೊಡ್ಡ ಪಟ್ಟಿ ಇದೆ. ಚಾಮರಾಜನಗರ ಭಾಗದ ಪ್ರಭಾವಿ, ಹಿರಿಯ ರಾಜಕಾರಣಿ ಶ್ರೀನಿವಾಸ್ ಪ್ರಸಾದ್ ಯಾರು ಅಭ್ಯರ್ಥಿಯಾಗಬೇಕೆಂದು ಸೂಚಿಸುತ್ತಾರೋ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ಇದೆ. ಹೀಗಾಗಿ ಚಾಮರಾಜನಗರ ಲೋಕಸಭಾ ಕ್ಷೇತ್ರ ತೀವ್ರ ಸಂಚಲನ ಮೂಡಿಸಿದೆ. ಹಾಗಾದರೆ ಯಾರಿಗೆ ಚಾಮರಾಜನಗರ ಲೋಕಸಭೆ ಟಿಕೆಟ್ ಸಿಗಲಿದೆ ಎಂದು ಕ್ಷೇತ್ರದ ಜನರಲ್ಲಿ ಕುತೂಹಲ ಮೂಡಿಸಿದೆ. : - –-- – –