ಲೋಕಸಭೆ ಚುನಾವಣೆ ಟಿಕೆಟ್ ವಿಚಾರ: ಇಬ್ಬರಲ್ಲೂ ತಂದಾಕುವ ಕೆಲಸ ಮಾಡಬೇಡಿ- ಮಾಧ್ಯಮಗಳಿಗೆ ಶ್ರೀನಿವಾಸ್ ಪ್ರಸಾದ್ ಟಾಂಗ್. ಮೈಸೂರು,ಫೆಬ್ರವರಿ,22,2024(..):ಚಾಮರಾಜನಗರ ಲೋಕಸಭೆ ಕ್ಷೇತ್ರಕ್ಕೆ ಇಬ್ಬರು ಅಳಿಯಂದಿರು ಆಕಾಂಕ್ಷಿಗಳಾಗಿದ್ದರೆ ಆಗಲಿ, ಇಬ್ಬರಲ್ಲೂ ತಂದಾಕುವ ಕೆಲಸ ಮಾಡಬೇಡಿ ಎಂದು ಮಾಧ್ಯಮಗಳಿಗೆ ಸಂಸದ ಶ್ರೀನಿವಾಸ್ ಪ್ರಸಾದ್ ಟಾಂಗ್ ಕೊಟ್ಟರು. ಮೈಸೂರಿನಲ್ಲಿ ಇಂದು ಮಾತನಾಡಿದ ವಿ.ಶ್ರೀನಿವಾಸ್ ಪ್ರಸಾದ್, ಬಿ. ವೈ ವಿಜಯೇಂದ್ರ ಅವರು ನನ್ನನ್ನು ಸೌಹಾರ್ದಯುತವಾಗಿ ಭೇಟಿ ಮಾಡಿದ್ದಾರೆ. ಪರಸ್ಪರ ಒಂದಷ್ಟು ಮಾತುಕತೆ ನಡೆಸಿದ್ದಾರೆ. ನಾನು ಒಂದಷ್ಟು ನನ್ನ ರಾಜಕೀಯ ಅನುಭವದಿಂದ ಒಂದಷ್ಟು ಸಲಹೆ ಸೂಚನೆ ಕೊಟ್ಟಿದ್ದೇನೆ. ಅದನ್ನೆಲ್ಲ ಬಹಿರಂಗವಾಗಿ ಹೇಳಿಕೊಳ್ಳಲಿಕ್ಕೆ ಆಗಲ್ಲ ಎಂದರು. ಚುನಾವಣಾ ಮೈಸೂರಿಗೆ ಮಾತ್ರ ಅಲ್ಲ ಇಡೀ ದೇಶಕ್ಕೆ ಬಂದಿದೆ. ನಾನು ರಾಜಕೀಯಕ್ಕೆ ನಿನ್ನೆ ಮೊನ್ನೆ ಬಂದಿಲ್ಲ. ರಾಜ್ಯದ ಹಿರಿಯ ರಾಜಕಾರಣಿಗಳಲ್ಲಿ ನಾನೂ ಒಬ್ಬ. ನಾನು ಒಂದಷ್ಟು ಸಲಹೆ ಸೂಚನೆ ನೀಡಿದ್ದೇನೆ. ಅದನ್ನ‌ ಬಹಿರಂಗವಾಗಿ ಹೇಳಲಿಕ್ಕೆ ಹೋಗೋಲ್ಲ. ನಾನು 14 ಬಾರಿ ಚುನಾವಣೆಗಳಲ್ಲಿ ಸ್ಪರ್ಧೆ ಮಾಡಿದ್ದೇನೆ. ನನ್ನ ರಾಜಕೀಯ ಸಲಹೆಗಳನ್ನು ಕೇಳಿದ್ದಾರೆ. ಅದರ ಬಗ್ಗೆ ನಾನೂ ಕೂಡ ಹೇಳಿದ್ದೇನೆ ಎಂದರು. ನಮ್ಮ ಕುಟುಂಬದಿಂದ ನಮ್ಮ ಅಳಿಯ ಡಾ.ಮೋಹನ್ ಆಕಾಂಕ್ಷಿ ಆಗಿದ್ದಾರೆ. ನಾನು ಯಾರ ಮೇಲು ಪ್ರಭಾವ ಬೀರಲ್ಲ. ಸ್ಥಳೀಯವಾಗಿ ಸಮೀಕ್ಷೆ ಮಾಡಿ ಕ್ಷೇತ್ರದ ಮುಖಂಡರ ಜೊತೆ ಮಾತುಕತೆ ಮಾಡಿ ಅಭ್ಯರ್ಥಿ ಯಾರಾಗಬೇಕೆಂದು ನಿರ್ಧಾರ ಮಾಡುತ್ತಾರೆ. ಇದು ಇಲ್ಲಿ ಚರ್ಚೆ ಮಾಡಲಿಕ್ಕೆ ಮುನಿಸಿಪಾಲಿಟಿ ಚುನಾವಣೆ ಅಲ್ಲ. ನಾನು ಈಗಾಗಲೇ ಚುನಾವಣೆಗೆ ನಿಲ್ಲಲ್ಲ ಅಂತ ಹೇಳಿದ್ದೇನೆ ಎಂದು ಶ್ರೀನಿವಾಸ್ ಪ್ರಸಾದ್ ತಿಳಿಸಿದರು. ಚಾಮರಾಜನಗರ ಬಿಜೆಪಿ ಗೆಲ್ಲುವ ವಿಶ್ವಾಸ ಇದೆಯಾ ಎಂಬ ಮಾಧ್ಯಮಗಳ ಪ್ರಶ್ನೆಗೆ ನಾವು ಈಗಲೇ ಹೇಳಕ್ಕಾಗುತ್ತಾ ಎಲ್ಲರೂ ವಿಶ್ವಾಸ ಇದೆ ಅಂತ ಹೇಳ್ತಾರೆ. ನೀವು ಕೇಳಿದಾಗ ನಾನು ಮೂಗನಂಗೆ ಕೂರಕ್ಕಾಗಲ್ಲ. ನಾನೇನು ಕಿವುಡು ಮೂಗರ ಸ್ಕೂಲ್ ಟೀಚರ್ ಅಲ್ಲ. ನಾನು ಯಾವುದೇ ಪ್ರಚಾರಕ್ಕೆ ಹೋಗಲ್ಲ. ನನ್ನ ಆರೋಗ್ಯದ ದೃಷ್ಟಿಯಿಂದ ನಾನು ಎಲ್ಲೂ ಹೋಗಲ್ಲ. ನಾನು ಈಗ ಬಿಜೆಪಿ ಸಂಸದನಾಗಿ ಬಿಜೆಪಿಯಲ್ಲೇ ಇದ್ದು ನಿವೃತ್ತಿಯಾಗುತ್ತಿದ್ದೇನೆ ಇಬ್ಬರು ಅಳಿಯಂದಿರು ಆಕಾಂಕ್ಷಿಗಳಾಗಿದ್ದರೆ ಆಗಲಿ ಇಬ್ಬರಲ್ಲೂ ತಂದಾಕುವ ಕೆಲಸ ಮಾಡಬೇಡಿ ಎಂದು ಮಾಧ್ಯಮಗಳಿಗೆ ಶ್ರೀನಿವಾಸ್ ಪ್ರಸಾದ್ ತಿಳಿಸಿದರು. : - - –