ಸಿಎಂ ಬಿಎಸ್ ವೈ ರಾಜೀನಾಮೆಗೆ ಇಬ್ಬರು ಕೇಂದ್ರ ಸಚಿವರಿಂದ ಒತ್ತಡ- ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸಬಾಂಬ್… ವಿಜಯಪುರ,ಅ,9,2019(..): ಸಿಎಂ ಬಿಎಸ್ ಯಡಿಯೂರಪ್ಪಗೆ 76 ವರ್ಷವಾಗಿದೆ. ಅವರಿಂದ ರಾಜೀನಾಮೆ ಪಡೆಯಿರಿ ಎಂದು ಇಬ್ಬರು ಕೇಂದ್ರ ಸಚಿವರು ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸಬಾಂಬ್ ಸಿಡಿಸಿದ್ದಾರೆ. ಈ ಬಗ್ಗೆ ಇಂದು ಮಾಧ್ಯಮಗಳ ಜತೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಿಎಂ ಬಿಎಸ್ ಯಡಿಯೂರಪ್ಪರನ್ನ ಮುಗಿಸಲು ಇಬ್ಬರು ನಾಯಕರು ಯತ್ನಿಸುತ್ತಿದ್ದಾರೆ. ಸಿಎಂ ಬಿಎಸ್ ವೈ ರಾಜೀನಾಮೆ ಕೊಡಿಸಲು ಪ್ರಯತ್ನ ಪಡುತ್ತಿದ್ದಾರೆ. ನಾನು ಪ್ರಧಾನಿ ಮೋದಿ ಭೇಟಿ ಮಾಡುವ ಯತ್ನಕ್ಕೂ ಅವರೇ ಅಡ್ಡ ಹಾಕಿದ್ದಾರೆ. ನಾನು ಹೇಳಿಕೆ ನೀಡಿದ ಬಳಿಕ ಆ ಇಬ್ಬರು ಕೇಂದ್ರ ಸಚಿವರು ದೆಹಲಿಗೆ ಹೋಗಿದ್ರು. ಅವರು ಹೋಗಿದ್ದು ಪರಿಹಾರ ತರಲು ಅಲ್ಲ.ನನಗೆ ನೋಟೀಸ್ ಕೊಡಿಸಲು ಎಂದು ಕಿಡಿಕಾರಿದರು. ಇಂತಹ ಚಾಡಿಕೋರ ಸಚಿವರಿಂದ ರಾಜ್ಯದಲ್ಲಿ ಬಿಜೆಪಿ ಹಾಳಾಗುತ್ತಿದೆ. ನನ್ನನ್ನ ಪಕ್ಷದಿಂದ ಹೊರ ಹಾಕಿದರೂ ಯಾವುದೇ ಹಾನಿ ಇಲ್ಲ. ನನ್ನನ್ನ ಬಿಜೆಪಿ ಪಕ್ಷಕ್ಕೆ ಯಾರೂ ಸ್ವಾಗತಿಸಿರಲಿಲ್ಲ. ನನ್ನ ಶಕ್ತಿ ನೋಡಿ ಅಮಿತ್ ಶಾ ಅವರೇ ಪಕ್ಷಕ್ಕೆ ಕರೆದುಕೊಂಡಿದ್ದಾರೆ. ನಾನು ಜನರ ಭಾವನೆಯನ್ನ ಮೋದಿಗೆ ಹೇಳಲು ಹೆದರುವುದಿಲ್ಲ ಎಂದು ಬಸನಗೌಡ ಪಾಟೀಲ್ ಯತ್ನಾಳಿ ತಿಳಿಸಿದರು. : - –- -