ಎಲ್ಲಾ ಗಲಾಟೆಗಳಿಗೆ ಹೆಚ್.ಡಿ ಕುಮಾರಸ್ವಾಮಿಯೇ ನೇರ ಕಾರಣ-ಡಿಸಿಎಂ ಡಿ.ಕೆ ಶಿವಕುಮಾರ್. ರಾಮನಗರ, ಫೆಬ್ರವರಿ, 21,2024(..):ರಾಮನಗರದಲ್ಲಿ ಗಲಾಟೆ ಮಾಡಿಸುತ್ತಿರುವುದೇ ಜೆಡಿಎಸ್ . ಎಲ್ಲಾ ಗಲಾಟೆಗಳಿಗೂ ಅದರ ನಾಯಕ ಹೆಚ್​ಡಿ ಕುಮಾರಸ್ವಾಮಿ ಕಾರಣ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಆರೋಪಿಸಿದರು. ರಾಮನಗರದಲ್ಲಿ ಡಿಕೆ ಸಹೋದರರಿಂದ ಅಶಾಂತಿ ಸೃಷ್ಟಿ ಎಂಬ ಜೆಡಿಎಸ್ ನಾಯಕರ ಆರೋಪಕ್ಕೆ ತಿರುಗೇಟು ನೀಡಿದ ಡಿಸಿಎಂ ಡಿ.ಕೆ ಶಿವಕುಮಾರ್, ರಾಮನಗರದಲ್ಲಿ ನಡೆಯುತ್ತಿರುವ ಎಲ್ಲ ಗಲಾಟೆಗಳಿಗೆ ಕುಮಾರಸ್ವಾಮಿ ಅವರೇ ನೇರ ಕಾರಣ ಎಂದು ಹೇಳಿದರು. ರಾಮನಗರ ಪಿಎಸ್‌ಐ ಸಸ್ಪೆಂಡ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್, ನಾನೂ ಕೂಡ ಹೇಳಿದ್ದೆ. ಶಾಸಕರೂ ಕಾನೂನು ಪ್ರಕಾರ ಕೈಗೊಳ್ಳಿ ಎಂದಿದ್ದರು. ಈ ಬಗ್ಗೆ ತನಿಖೆ ಮಾಡಿ ತಪ್ಪಿದ್ರೆ ಕ್ರಮ ತಗೊಳ್ಳಿ ಎಂದು ನಾವು ಅಧಿಕಾರಿಗಳಿಗೆ ಹೇಳಿದ್ದೆವು. ಇಲ್ಲಿ ಯಾರಿಗೂ ಅನ್ಯಾಯ ಆಗಬಾರದು ಅಂತ ಹೇಳಿದ್ದೆ. ಈ ವಿಚಾರದಲ್ಲಿ ಬಿಜೆಪಿ – ಜೆಡಿಎಸ್​​ನವರು ರಾಜಕೀಯ ಮಾಡ್ತಿದ್ದಾರೆ. ಅವರಿಗೆ ಬೇರೆ ಕೆಲಸ ಇಲ್ಲ, ಬಿಜೆಪಿಯವರು ಅಶಾಂತಿ ಸೃಷ್ಟಿಸುವುದು ಮಾಮೂಲಿ. ಕೋಮು ವಿಚಾರಗಳನ್ನು ತೆಗೆದುಕೊಂಡು ರಾಜಕೀಯ ಮಾಡುತ್ತಾರೆ. ಬಿಜೆಪಿಯವರಿಗೆ ಅಲ್ಪಸಂಖ್ಯಾತರನ್ನು ಕಂಡರೆ ಆಗುವುದಿಲ್ಲ. ಸ್ಥಳೀಯ ಶಾಸಕ, ಅಧಿಕಾರಿ ಅಲ್ಪಸಂಖ್ಯಾತ ಸಮುದಾಯದವರು ಆಗಿರುವುದರಿಂದ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. : – - – - .