ಕೊನೆಯ ಹಂತದ ತಾಲೀಮು: ಮರದ ಅಂಬಾರಿ ಹೊತ್ತು ಹೆಜ್ಜೆ ಹಾಕಿದ ಕ್ಯಾಪ್ಟನ್ ಅರ್ಜುನ… ಮೈಸೂರು,ಸೆ,19,2019(..): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ದಿನಗಣನೆ ಆರಂಭವಾಗಿದ್ದು ವಿಜಯದಶಮಿ ಜಂಬೂಸವಾರಿ ಮೆರವಣಿಗೆಯಲ್ಲಿ ಚಿನ್ನದ ಅಂಬಾರಿ ಹೊತ್ತು ಸಾಗಲಿರುವ ಕ್ಯಾಪ್ಟನ್ ಅರ್ಜುನನಿಗೆ ಮರದ ಅಂಬಾರಿ ಕಟ್ಟಿ ತಾಲೀಮು ನಡೆಸಲಾಯಿತು. ದಸರಾ ಗಜ ಪಡೆಗೆ ಅರಣ್ಯಾಧಿಕಾರಿಗಳು ಕೊನೆಯ ಹಂತದ ತಾಲೀಮು ನಡೆಸುತ್ತಿದ್ದು, ಡಿಸಿಎಫ್ ಅಲೆಕ್ಸಾಂಡರ್, ಪಶು ವೈದ್ಯ ಡಾ. ನಾಗರಾಜ್ ಮಾರ್ಗದರ್ಶನದಲ್ಲಿ ಕ್ಯಾಪ್ಟನ್ ಅರ್ಜುನ ಬೆನ್ನಿಗೆ ಮಾವುತರು, ಕಾವಾಡಿಗಳು ಮರದ ಅಂಬಾರಿ ಕಟ್ಟಿದರು. ಅರಮನೆ ಆವರಣದಲ್ಲಿರುವ ಕ್ರೇನ್ ಮೂಲಕ ಆನೆ ಬೆನ್ನಿಗೆ ಅಂಬಾರಿ ಕಟ್ಟಲಾಯಿತು. ಬಳಿಕ ಸುಮಾರು 35O ಕೆ.ಜಿ. ತೂಕದ ಮರದ ಅಂಬಾರಿ, 3OO ಕೆಜಿ ತೂಕದಷ್ಟು ಮರಳಿನ ಮೂಟೆಗಳು ಸೇರಿದಂತೆ ಒಟ್ಟು 65O ಕೆಜಿ ತೂಕವನ್ನು ಹೊತ್ತು ಅರ್ಜುನ ಸಾಗಿದನು. ಅರಮನೆ ಆವರಣದಿಂದ ಬನ್ನಿ ಮಂಟಪದವರಗೆ ಹೆಜ್ಜೆ ಹಾಕಿದ ಕ್ಯಾಪ್ಟನ್ ಅರ್ಜುನನಿಗೆ ಕುಮ್ಕಿ ಆನೆಗಳಾಗಿ ಸಾಗಿದ ವಿಜಯ ಮತ್ತು ಕಾವೇರಿ ಸಾಥ್ ನೀಡಿದವು. ಉಳಿದ ಆನೆಗಳು ಕೂಡ ನಿತ್ಯ ತಾಲೀಮಿನಲ್ಲಿ ಭಾಗಿಯಾಗಿದ್ದವು. ಜಂಬೂಸವಾರಿ ಮೆರವಣಿಗೆ ಸಾಗುವ ಮಾರ್ಗದಲ್ಲಿ ಸಾಗಿದ ದಸರಾ ಗಜಪಡೆಯನ್ನು ಸಾರ್ವಜನಿಕರು ನೋಡಿ ಕಣ್ತುಂಬಿಕೊಂಡು ಸಂಭ್ರಮಿಸಿದರು. ಆರೋಗ್ಯ ಏರುಪೇರು ಹಿನ್ನೆಲೆ ಅಂತಿಮ ತಾಲೀಮಿಗೆ ವರಲಕ್ಷ್ಮೀ ಹಾಗೂ ಧನಂಜಯ ಆನೆಗಳು ಗೈರಾಗಿದ್ದವು. : - - - –