ಇಡಿ, ಐಟಿ ಬಳಸಿಕೊಂಡು ಡಿಕೆಶಿ ವಿರುದ್ದ ಕೇಂದ್ರ ಬಿಜೆಪಿ ಸರ್ಕಾರದಿಂದ ಹೇಡಿತನದ ರಾಜಕಾರಣ- ಮಾಜಿ ಸಚಿವ ಕೃಷ್ಣಭೈರೇ ಗೌಡ ಕಿಡಿ…. ಬೆಂಗಳೂರು,ಸೆ,11,2019(..): ಇಡಿ ಮತ್ತು ಐಟಿ ಬಳಸಿಕೊಂಡು ಮಾಜಿ ಸಚಿವ ಕಾಂಗ್ರೆಸ್ ನಾಯಕ ಡಿ.ಕೆ ಶಿವಕುಮಾರ್ ವಿರುದ್ದ ಕೇಂದ್ರ ಬಿಜೆಪಿ ಸರ್ಕಾರ ಹೇಡಿತನದ ರಾಜಕಾರಣ ಮಾಡುತ್ತಿದೆ ಎಂದು ಮಾಜಿ ಸಚಿವ ಕೃಷ್ಣಭೈರೇಗೌಡ ಕಿಡಿಕಾರಿದರು. ಮಾಜಿ ಸಚಿವ ಡಿ,ಕೆ ಶಿವಕುಮಾರ್ ಬಂಧನ ಖಂಡಿಸಿ ನಡೆದ ಪ್ರತಿಭಟನಾರ್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಸಚಿವ ಕೃಷ್ಣ ಭೈರೇಗೌಡ, ಇಡಿ, ಐಟಿ ಹಾಗೂ ಸಿಬಿಐನಂತಹ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಕೇಂದ್ರ ಬಿಜೆಪಿ ಸರ್ಕಾರ ಸೇಡಿನ ರಾಜಕಾರಣ ಮಾಡುತ್ತಿದೆ. ಜನರ ಮಧ್ಯೆ ಬಂದು ರಾಜಕಾರಣ ಮಾಡಲು ಸಾಧ್ಯವಾಗದೇ ಬಿಜೆಪಿ ಅವರು ಈ ರೀತಿ ರಾಜಕಾರಣ ಮಾಡುತ್ತಿದ್ದಾರೆ. ಚುನಾವಣಾ ರಣಾಂಗಣದಲ್ಲಿ ಹೋರಾಟ ಮಾಡಲು ಹೆದರಿ ಇಡಿ ಮತ್ತು ಐಟಿ ಮೂಲಕ ಹೇಡಿ ರಾಜಕಾರಣ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು. ‘ಉದ್ಯಮಿ ವಿಜಯ ಮಲ್ಯ ದೇಶದ 9 ಸಾವಿರ ಕೋಟಿಯನ್ನು ಮೋಸ ಮಾಡಿ ವಿದೇಶಕ್ಕೆ ಪರಾರಿಯಾಗಿದ್ದಾನೆ. ಮಲ್ಯ ಪರಾರಿಯಾಗುವ ವೇಳೆ ಐಟಿ ಇಡಿ ಅಧಿಕಾರಿಗಳು ಎಲ್ಲಿಗೆ ಹೋಗಿದ್ರು ಎಂದು ಪ್ರಶ್ನಿಸಿದ ಕೃಷ್ಣಬೈರೇಗೌಡ, ಡಿಕೆ ಶಿವಕುಮಾರ್ ಅವರ ಮೇಲೆ ಕೇವಲ 5 ಕೋಟಿ ಹಣದ ಲೆಕ್ಕ ಕೊಡಬೇಕಿದೆ. ಅದರ ಜವಾಬ್ದಾರಿಯನ್ನು ಡಿಕೆ ಶಿವಕುಮಾರ್ ತೆಗೆದುಕೊಂಡಿದ್ದು, ಅದಕ್ಕೆ ಉತ್ತರ ನೀಡುತ್ತಿದ್ದರೂ ಅಧಿಕಾರ ದುರ್ಬಳಕೆ ಮಾಡಿಕೊಂಡು ಅವರನ್ನು ಬಂಧಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ‘ಇನ್ನು ನಮ್ಮ ರಾಜ್ಯದ ಹೆಮ್ಮೆಯ ಉದ್ಯಮಿ ಸಿದ್ಧಾರ್ಥ ಅವರದ್ದು ಆತ್ಮಹತ್ಯೆ ಅಲ್ಲ. ಅದು ಕೊಲೆ. ಸಿದ್ಧಾರ್ಥ್ ಸಾವಿರಾರು ಕನ್ನಡಿಗರಿಗೆ ಉದ್ಯೋಗ ನೀಡಿದ್ದರು. ಆದರೆ ಕೇಂದ್ರ ಸರ್ಕಾರ ವಿರೋಧ ಪಕ್ಷಗಳನ್ನು ಮುಗಿಸಲು ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು. : - – - - -