ಡಿ.ಕೆ ಶಿವಕುಮಾರ್ ವಿರುದ್ದ ಬಿಜೆಪಿ ಸೇಡಿನ ರಾಜಕಾರಣ- ಮಾಜಿ ಸಿಎಂ ಸಿದ್ಧರಾಮಯ್ಯ ಕಿಡಿ… ಕೊಡಗು,ಆ,30,2019(..): ಮಾಜಿ ಸಚಿವ ಡಿ.ಕೆ ಶಿವಕುಮಾರ್ ವಿಚಾರದಲ್ಲಿ ಬಿಜೆಪಿ ಸೇಡಿನ ರಾಜಕಾರಣ ಮಾಡುತ್ತಿದೆ. ಗುಜರಾತ್ ಶಾಸಕರನ್ನ ಡಿಕೆಶಿ ರೆಸಾರ್ಟ್ ನಲ್ಲಿ ಇಟ್ಟ ಕಾರಣ ಇಡಿ ಮೂಲಕ ಬಿಜೆಪಿ ಸೇಡು ತೀರಿಸಿಕೊಳ್ಳುತ್ತಿದೆ‌ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು. ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಕರಡಿಗೂಡಿನಲ್ಲಿ ಈ ಬಗ್ಗೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಗುಜರಾತ್ ಶಾಸಕರನ್ನ ಡಿಕೆ ಶಿವಕುಮಾರ್ ರೆಸಾರ್ಟ್ ನಲ್ಲಿ ಇಟ್ಟ ಕಾರಣ ಇಡಿ ಮೂಲಕ ಸೇಡು ತೀರಿಸಿಕೊಳ್ಳುತ್ತಿದೆ‌. ಬಿಜೆಪಿ ಸೇಡಿನ ರಾಜಕಾರಣ ಮಾಡುತ್ತಿದೆ‌. ಅವ್ರು ತಪ್ಪು ಮಾಡಿದ್ರೆ ಕಾನೂನು ರೀತಿ ಕ್ರಮ ಕೈಗೊಳ್ಳಬಹುದಿತ್ತು. ಈ ರೀತಿ ಸೇಡಿನ ರಾಜಕಾರಣ ಸರಿಯಲ್ಲ ಎಂದು ಹರಿಹಾಯ್ದರು. ಎಲ್ಲರೂ ಒಬ್ಬ ತಾಯಿಗೆ ಹುಟ್ಟೋದು ಕಣ್ರಿ… ಇದೇ ವೇಳೆ ನಾನು ಒಬ್ಬ ತಾಯಿಗೆ ಹುಟ್ಟಿದ್ದೇನೆ ಅನ್ನೋ ಸಚಿವ ಈಶ್ವರಪ್ಪ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಎಲ್ಲರೂ ಒಬ್ಬ ತಾಯಿಗೆ ಹುಟ್ಟೋದು ಕಣ್ರಿ. ಸ್ವಾಭಿಮಾನ ಇಲ್ಲದಿದ್ದವ್ರು ಒಂದೇ ಪಕ್ಷದಲ್ಲಿ ಇರೋರು. ನನಗೆ ಸ್ವಾಭಿಮಾನ ಇರೋದಕ್ಕೆ ರಾಜಕಾರಣ ಮಾಡುತ್ತಿರೋದು ಎಂದು ಈಶ್ವರಪ್ಪ ವಿರುದ್ದ ಆಕ್ರೋಶ ಹೊರ ಹಾಕಿದರು. ಇದೇ ವೇಳೆ ಸಿಎಂ ಬಿ.ಎಸ್ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಸಿಎಂ ಸಿದ್ದರಾಮಯ್ಯ, ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಎಷ್ಟು ದಿನ ಆಯ್ತು. ಈವರೆಗೂ ಯಾಕೆ ಪ್ರಧಾನಮಂತ್ರಿ ಮೋದಿ ಅವ್ರ ಗಮನಕ್ಕೆ ರಾಜ್ಯದ ಸಮಸ್ಯೆ ಗಮನಕ್ಕೆ ತಂದಿಲ್ಲ.ಪರಿಹಾರ ತರುವಲ್ಲಿ ಮುಖ್ಯಮಂತ್ರಿಗಳು, ರಾಜ್ಯ ದ ಸಂಸದರು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆರೋಪಿಸಿದರು. ಮೋದಿ ರಾಜ್ಯಕ್ಕೆ ಬರುತ್ತಿರೋದು ನೆರೆ ಸಮಸ್ಯೆ ವೀಕ್ಷಣೆಗೆ ಅಲ್ಲ ಅವ್ರು ಬೇರೆ ಕೆಲಸಕ್ಕೆ ಬರ್ತಿದ್ದಾರೆ. ಕೇಂದ್ರ ಸರ್ಕಾರ ಈ ಕೂಡಲೇ ರಾಷ್ಟೀಯ ವಿಪತ್ತು ಅಂತಾ ಘೋಷಣೆ ಮಾಡಬೇಕು. ರಾಜ್ಯಕ್ಕೆ 5 ಸಾವಿರ ಕೋಟಿ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು ಆಡಳಿತ ಪಕ್ಷದವರು ನೆರೆ ಸಮಸ್ಯೆ ಕೇಳ್ತಿಲ್ಲ ಎಂಬ ಆರೋಪ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಬಿಜೆಪಿ ಮಂದಿ ಬಂದು ಅವರ ಸಮಸ್ಯೆ ಕೇಳಬೇಕು. ಜನರ ಸಮಸ್ಯೆ ಕೇಳೋದು ಅವರ ಕರ್ತವ್ಯ ಎಂದರು. : - - - - -