ಸಂಪುಟ ವಿಸ್ತರಣೆಗೆ ಸಿಎಂ ಬಿಎಸ್ ವೈ ಕಸರತ್ತು: ಮೈಸೂರು ಭಾಗದಲ್ಲಿ ಯಾರಿಗೆ ಸಿಗುತ್ತೆ ಸಚಿವ ಸ್ಥಾನ…? ಮೈಸೂರು,ಆ,17,2019(..): ಸಚಿವ ಸಂಪುಟ ರಚನೆ ಕುರಿತು ಚರ್ಚಿಸಲು ಸಿಎಂ ಬಿಎಸ್ ಯಡಿಯೂರಪ್ಪ ನವದೆಹಲಿಗೆ ತೆರಳಿದ್ದು ಇಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಜತೆ ಚರ್ಚೆ ನಡೆಸಲಿದ್ದಾರೆ. ಹೀಗಾಗಿ ಇಂದು ಸಂಭಾವ್ಯ ಸಚಿವರ ಪಟ್ಟಿಗೆ ಅಂಕಿತ ಬೀಳುವ ಸಾಧ್ಯತೆ ಇದೆ. ನೆರೆ ಪರಿಹಾರ ಮತ್ತು ಸಚಿವ ಸಂಪುಟ ರಚನೆ ಸಂಬಂಧ ಚರ್ಚಿಸಲು ನವದೆಹಲಿಯಲ್ಲೇ ರಾಜ್ಯ ಬಿಜೆಪಿ ನಾಯಕರು ಬೀಡು ಬಿಟ್ಟಿದ್ದಾರೆ. ಇನ್ನು ಸಂಭಾವ್ಯ ಸಚಿವರ ಪಟ್ಟಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಒಪ್ಪಿಗೆ ಒಂದೇ ಬಾಕಿ ಇದ್ದು, ನಾಳೆ ಅಥವಾ ನಾಳಿದ್ದು ಮೊದಲ ಹಂತದ ಸಂಪುಟ ವಿಸ್ತರಣೆ ಮಾಡುವ ಸಾಧ್ಯತೆ ಇದೆ. ಸಂಪುಟ ರಚನೆ ವೇಳೆ ಮೈಸೂರು ಭಾಗದಲ್ಲಿ ಸಂಪುಟ ಸೇರುವ ರೇಸ್ ನಲ್ಲಿ ಶಾಸಕ ರಾಮದಾಸ್, ಹೆಚ್. ವಿಶ್ವನಾಥ್ ಹಾಗೂ ಕೆ ಜೆ ಬೋಪಯ್ಯ ಇದ್ದಾರೆ. ಆದರೆ ಶಾಸಕ ಎಸ್. ಎ ರಾಮದಾಸ್ ಗೆ ಸಚಿವ ಸ್ಥಾನ ಸಿಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಈ ನಡುವೆ ವಿಶ್ವನಾಥ್ ಬಿಜೆಪಿ ಸೇರ್ಪಡೆಗೊಂಡರೆ ರಾಮದಾಸ್ ಸಚಿವರಾಗುವಲ್ಲಿ ಸ್ವಲ್ಪ ಬದಲಾವಣೆಯಾಗುವ ಸಾಧ್ಯತೆ ಇದೆ . ಒಂದು ವೇಳೆ ಅಮಿತ್ ಶಾ ಸೂಚನೆಯಂತೆ ಹೊಸ ಮುಖಗಳಿಗೆ ಮಣೆ ಹಾಕುವುದಾದರೆ ನಂಜನಗೂಡು ಶಾಸಕ ಹರ್ಷವರ್ಧನ್ ಮುಂಚೂಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಇಂದು ಸಂಜೆ ಅಥವಾ ನಾಳೆ ಒಳಗೆ ಮೊದಲ ಹಂತದ ಸಂಭಾವ್ಯ ಸಂಪುಟ ಸಚಿವರ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ. : --- – .