ಪ್ರವಾಹದ ತೀವ್ರತೆಗೆ ಕಪಿಲಾ ನದಿ ತಡೆಗೋಡೆ ಕುಸಿತ: 20ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು… ಮೈಸೂರು,ಆ,12,2019(..): ಕಳೆದ ಒಂದುವಾರದಿಂದ ಸುರಿದ ಧಾರಾಕಾರ ಮಳೆಗೆ ರಾಜ್ಯದಲ್ಲಿ ನೆರೆ ಪರಿಸ್ಥಿತಿ ಉಂಟಾಗಿದ್ದು, ವರುಣನ ಆರ್ಭಟಕ್ಕೆ ಕಾವೇರಿ ಮತ್ತು ಕಪಿಲಾ ನದಿಯ ಪ್ರವಾಹದ ತೀವ್ರತೆ ಹೆಚ್ಚಾದ ಹಿನ್ನಲೆ ಕಪಿಲಾ ನದಿಯ ತಡೆಗೋಡೆ ಕುಸಿದು ಮನೆಗಳಿಗೆ ನೀರು ನುಗ್ಗಿರುವ ಮೈಸೂರು ಜಿಲ್ಲೆ ಟಿ.ನರಸೀಪುರದ ತಿರುಮಕೂಡಲಿನಲ್ಲಿ ಘಟನೆ ನಡೆದಿದೆ. ಭಾರಿ ಮಳೆಯಿಂದಾಗಿ ಕಾವೇರಿ ಮತ್ತು ಕಪಿಲಾ ನದಿಯ ಪ್ರವಾಹದ ತೀವ್ರತೆ ಹೆಚ್ಚಾದ ಹಿನ್ನಲೆ, ಕಪಿಲಾ ನದಿಯ ತಡೆಗೋಡೆ ಕುಸಿದು ಬಿದ್ದ ಪರಿಣಾಮ ನೀರಿನ ಪೈಪ್‌ಗೆ ಹಾನಿಯಾಗಿದ್ದು ತಿರುಮಕೂಡಲಿನ 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಪ್ರವಾಹದ ತೀವ್ರತೆಗೆ ಎರಡು ಮನೆಗಳು ಕುಸಿದು ಬಿದ್ದಿದ್ದು ನದಿ ನೀರಿನಲ್ಲಿ ಮೂರು ಜಾನುವಾರುಗಳು ಕೊಚ್ಚಿ ಹೋಗಿವೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ತಹಶೀಲ್ದಾರ್ ನಾಗಪ್ರಶಾಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿಶಾಮಕ ದಳದ ಬೋಟ್ ನಲ್ಲಿ ತಹಶೀಲ್ದಾರ್ ನೇತೃತ್ವದ ಅಧಿಕಾರಿಗಳ ತಂಡ ತೆರಳಿ ಪರಿಶೀಲನೆ ನಡೆಸಿದೆ. ಆದಿಚುಂಚನಗಿರಿ ಭವನದಲ್ಲಿ ಗಂಜಿ ಕೇಂದ್ರ ತೆರೆಯಲಾಗಿದ್ದು ನೆರೆಸಂತ್ರಸ್ತರಿಗೆ ಆಶ್ರಯ ನೀಡಲಾಗಿದೆ. ಈ ವೇಳೆ ಯಾವುದೇ ರೀತಿಯ ಅಹಿತಕರ ಘಟನೆ ನಡೆದಿಲ್ಲ ಎಂದು ತಹಸೀಲ್ದಾರ್ ನಾಗಪ್ರಶಾಂತ್ ಸ್ಪಷ್ಟನೆ ನೀಡಿದ್ದಾರೆ. : - - - - – 20