ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಿದ ರಮೇಶ್ ಕುಮಾರ್… ಬೆಂಗಳೂರು,ಜು,29,2019(..): ಸಿಎಂ ಬಿಎಸ್ ಯಡಿಯೂರಪ್ಪ ವಿಶ್ವಾಸಮತಯಾಚನೆ ಸಾಬೀತುಪಡಿಸಿದ ಬೆನ್ನಲ್ಲೆ ಸ್ಪೀಕರ್ ಸ್ಥಾನಕ್ಕೆ ರಮೇಶ್ ಕುಮಾರ್ ರಾಜೀನಾಮೆ ಸಲ್ಲಿಸಿದರು. ಇಂದು ಸಿಎಂ ಬಿಎಸ್ ಯಡಿಯೂರಪ್ಪ ವಿಶ್ವಾಸಮತಯಾಚನೆ ಮಾಡಿದರು. ಬಳಿಕ ಧನವಿನಿಯೋಗ ವಿಧೇಯಕ ಅಂಗೀಕಾರವಾಗಿ ಪೂರಕ ಬಜೆಟ್ ಗೆ ಅನುಮೋದನೆ ಸಿಕ್ಕಿತು. ತದ ನಂತರ ವಿಧಾನಸಭೆಯಲ್ಲೇ ತಮ್ಮ ರಾಜೀನಾಮೆಯನ್ನ ಸ್ಪೀಕರ್ ರಮೇಶ್ ಕುಮಾರ್ ಘೋಷಿಸಿದರು. ಈ ವೇಳೆ ಮಾತನಾಡಿದ ರಮೇಶ್ ಕುಮಾರ್, ನಾನು ಈ ಸ್ಥಾನಕ್ಕೆ ಚಿಕ್ಕವನು, ಆದರೇ ನನಗೆ ನೀಡಿರುವ ಸ್ಥಾನ ದೊಡ್ಡದು. ಆ ಸ್ಥಾನಕ್ಕೆ ಗೌರವ ಕೊಟ್ಟು ನನ್ನ ಕೆಲಸವನ್ನು ಮಾಡಿದ್ದೇನೆ. ಆತ್ಮಸಾಕ್ಷಿಯಾಗಿ ಸಂವಿಧಾನಾತ್ಮಕವಾಗಿ ನಾನು ಕೆಲಸ ಮಾಡಿದ್ದೇನೆ ಸ್ಪೀಕರ್ ಸ್ಥಾನಕ್ಕೆ ಅಪಚಾರವಾಗದಂತೆ ಕರ್ತವ್ಯ ನಿರ್ವಹಿಸಿದ್ದೇನೆ ಎಂದರು. ಹಾಗೆಯೇ ನನ್ನ ಸಿಬ್ಬಂದಿಗಳಿಗೆ, ನನ್ನ ಎಲ್ಲಾ ಕಾರ್ಯದರ್ಶಿಗಳಿಗೆ, ಡಿ ಗ್ರೂಪ್ ನೌಕರರಿಗೆ, ಕೃತಜ್ಞತೆಯನ್ನು ತಿಳಿಸುತ್ತಾ ಹೆಚ್ ಡಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾದಾಗ, ಸೋನಿಯಾಗಾಂಧಿಯವರು ಕರೆಮಾಡಿ ತಾವು ಸ್ಪೀಕರ್ ಆಗುವಂತೆ ಸೂಚಿಸಿದ್ದರು. ಹೀಗಾಗಿ ಆ ಸ್ಥಾನವನ್ನು ಅಲಂಕರಿಸಿದೆ. ಅವರಿಗೆಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು. ಇದಾದ ನಂತರ ಡೆಪ್ಯೂಟಿ ಸ್ಪೀಕರ್ ಕಲಾಪವನ್ನ ಸಂಜೆ 5 ಗಂಟೆಗೆ ಮುಂದೂಡಿದರು. : - - -