ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿದ ತಂದೆ-ಮಗನ ಬಂಧನ ಬೆಂಗಳೂರು:ಜುಲೈ-27: ಕರ್ತವ್ಯನಿರತ ಪೊಲೀಸರನ್ನು ನಿಂದಿಸಿ, ಹಲ್ಲೆ ನಡೆಸಿದ ಹಿನ್ನಲೆಯಲ್ಲಿ 40 ವರ್ಷದ ತಂದೆ ಹಾಗೂ ಮಗನನ್ನು ಪೊಲೀಸರು ಬಂಧಿಸಿರುವ ಘಟನೆ ಹೊಸಕೋಟೆಯಲ್ಲಿ ನಡೆದಿದೆ. ಅತಿವೇಗವಾಗಿ ಬೈಕ್ ಚಲಾಯಿಸಿಕೊಂಡು ಬಂದ ಮಗನನ್ನು ಪೊಲೀಸರು ತಡೆದು ದಾಖಲೆಗಳನ್ನು ಕೇಳಿದ್ದಾರೆ. ಬೈಕ್ ದಾಖಲೆಗಳನ್ನು ನೀಡದ ಯುವಕ ಪೊಲೀಸರನ್ನು ನಿಂದಿಸಲು ಆರಂಭಿಸಿದ್ದಾನೆ. ಅಲ್ಲದೇ ಸ್ಥಳಕ್ಕೆ ತನ್ನ ತಂದೆಯನ್ನು ಕರೆದಿದ್ದಾನೆ. ಸ್ಥಳಕ್ಕಾಗಮಿಸಿದ ಆತನ ತಂದೆ ಕೂಡ ಪೊಲೀಸರನ್ನು ನಿಂದಿಸಲು ಆರಂಭಿಸಿದ್ದಾನೆ. ಬಳಿಕ ಪೊಲಿಸರ ಮೇಲೆಯೇ ಹಲ್ಲೆ ನಡೆಸಿದ್ದಾರೆ. ತನ್ನ ಸ್ನೇಹಿತರನ್ನು ಕರೆದು ಬೈಕ್ ತೆಗೆದುಕೊಂಡು ಹೋಗುವಂತೆಯೂ ಸೂಚಿಸಿದ್ದಾನೆ. ಪರಿಸ್ಥಿತಿ ಕೈಮೀರುತ್ತಿದ್ದಂತೆಯೇ ಇಬ್ಬರು ಪೊಲಿಸರು ಇನ್ನಷ್ಟು ತಮ್ಮ ಸಿಬ್ಬಂದಿಗಳಿಗೆ ಕರೆಮಾಡಿ ತಂದೆ-ಮಗ ಇಬ್ಬರನ್ನೂ ವಶಕ್ಕೆ ಪಡೆದುಕೊಂಡು ಹೋಗಿದ್ದಾರೆ. ಹೊಸಕೋಟೆ ಪಟ್ಟಣದ ಕನಕ ನಗರದಲ್ಲಿರುವ ಭೀಮಣ್ಣ ಪ್ರಾವಿಜನ್ ಸ್ಟೋರ್ ಬಳಿ ಈ ಘಟನೆ ನಡೆದಿದೆ. ಬಂಧಿತ ತಂದೆ 45 ವರ್ಷದ ಮುಕ್ಸುದ್ ಅಹ್ಮದ್ ಹಾಗೂ ಮಗನನ್ನು ಸೈಯದ್ ಸುಲ್ತಾನ್ (22) ಎಂದು ಗುರುತಿಸಲಾಗಿದ್ದು, ಇವರು ಹೊಸಕೋಟೆ ಬಟ್ಟೆ ವ್ಯಾಪಾರಿಗಳೆಂದು ತಿಳಿದುಬಂದಿದೆ. ಮಂಗಳವಾರ ರಾತ್ರಿ, ಇಬ್ಬರು ಪೊಲೀಸರು ಈ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದಾಗ ಬೈಕ್‌ನಲ್ಲಿ ಅತಿವೇಗವಾಗಿ ಬಂದ ಯುವಕನನ್ನು ತಡೆದು ನಿಲ್ಲಿಸಿದ್ದಾರೆ. ಬೈಕ್‌ನ ದಾಖಲೆಗಳನ್ನು ತೋರಿಸಲು ಆತ ನಿರಾಕರಿಸಿದ್ದಾನೆ. ಇದನ್ನು ಪ್ರಶ್ನಿಸಿದ್ದಕ್ಕೆ ಹೊಸಕೋಟೆ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್ ರಮೇಶ್ ಬಾಬು ಮತ್ತು ಪ್ರಸನ್ನ ಕುಮಾರ್ ಮೇಲೆ ಇಬ್ಬರೂ ಹಲ್ಲೆ ಮಾಡಿದ್ದಾನೆ. ಹಲ್ಲೆಕೋರರನ್ನು ತೀವ್ರವಾಗಿ ವಿಚಾರಣೆ ನಡೆಸಲಾಗಿದೆ. ಆದರೆ ಬೈಕ್ ದಾಖಲೆಗಳು ಅವರ ಬಳಿ ಇಲ್ಲದಿರುವುದು ತಿಳಿದುಬಂದಿದ್ದು, ಈ ಬೈಕ್ ಕದ್ದು ತಂದ ಬೈಕ್ ಇರಬಹುದು ಎಂದು ಪೊಲಿಸರು ಶಂಕೆ ವ್ಯಕ್ತಪಡಿಸಿದ್ದಾರೆ. ಬೈಕ್ ನ್ನು ಸೀಜ್ ಮಾಡಿ ವಶಕ್ಕೆ ಪಡೆದುಕೊಂಡಿದ್ದಾರೆ. -- -- - –