ಪತ್ನಿ ಬೇಕೆಂದು 120 ಅಡಿ ಮೊಬೈಲ್ ಟವರ್ ಏರಿ ಕುಳಿತು ಪ್ರತಿಭಟಿಸಿದ ವ್ಯಕ್ತಿ ರಾಯಚೂರು:ಜುಲೈ-9:(..) ಪ್ರೀತಿಸಿ ಮದುವೆಯಾದ ವ್ಯಕ್ತಿಯೊಬ್ಬ ತನ್ನ ಪತ್ನಿಗಾಗಿ 120 ಅಡಿ ಮೊಬೈಲ್ ಟವರ್ ಏರಿ ಪ್ರತಿಭಟಿಸಿದ ಘಟನೆ ರಾಯಚೂರಿನ ಪಿಎನ್ ಟಿ ಕ್ವಾಟ್ರಸ್‍ನಲ್ಲಿ ನಡೆದಿದೆ. ಶಾಂತಕುಮಾರ (32) ಟವರ್ ಏರಿದ ಯುವಕ. ಶಾಂತಕುಮಾರ್ ಸೆಲ್ಫಿ ವಿಡಿಯೋ ಮಾಡಿ, ನಿಜಲಿಂಗಪ್ಪ ಕಾಲೋನಿಯ ಕೆಇಬಿ ಶಾಲೆ ಬಳಿಯ ಬಿಎಸ್ಎನ್ಎಲ್ ಟವರ್ ಏರಿ ಕುಳಿತಿದ್ದಾನೆ. ಅಲ್ಲದೆ ಪತ್ನಿ ಬರುವವರೆಗೂ ಟವರ್ ನಿಂದ ಇಳಿಯುವುದಿಲ್ಲ ಎಂದು ಪಟ್ಟುಹಿಡಿದಿದ್ದಾನೆ. ಹಸ್ಕಿಹಾಳ ಗ್ರಾಮದ ಶಾಂತಕುಮಾರ್, ಕವಿತಾ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದು, ಶಾಂತಕುಮಾರ್ ಗಾಗಿ ಕವಿತಾ ಮನೆ ಬಿಟ್ಟು ಬಂದಿದ್ದಳು. ಹೀಗೆ ಮನೆ ಬಿಟ್ಟುಬಂದ ಕವಿತಾಳನ್ನು ಶಾಮ್ತಕುಮಾರ್ ವಿವಾಹವಾಗಿದ್ದಾನೆ. ಈ ಬಗ್ಗೆ ಸ್ವತ: ಶಾಂತಕುಮಾರ್ ವಿಡಿಯೋಮಾಡಿ ಮಾಡಿದ್ದಾನೆ. ಶಾಂತಕುಮಾರ್ ಹೇಳುವ ಪ್ರಕಾರ, ನನ್ನ ಬಳಿ ಮದುವೆಯ ದಾಖಲೆಗಳು ಇದೆ. ಆದರೆ ಈಗ ಕವಿತಾ ಪೋಷಕರು ನಾವು ಸಾಯುತ್ತೇವೆ ಎಂದು ಹೆದರಿಸಿ ಆಕೆಯನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ. ಅವರು ಕರೆದುಕೊಂಡು ಹೋಗಿ ಕವಿತಾಳನ್ನು ಎಲ್ಲಿ ಇಟ್ಟಿದ್ದಾರೆ ಎಂಬುದು ಗೊತ್ತಿಲ್ಲ. ಆದರೆ ಈಗ ಅವರ ಪೋಷಕರು ನಾನು ಕಟ್ಟಿದ್ದ ತಾಳಿಯನ್ನು ತೆಗೆದು ಬೇರೆ ಮದುವೆ ಮಾಡಿಸಲು ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ ದಯವಿಟ್ಟು ಪೊಲೀಸ್ ಅಧಿಕಾರಿಗಳು ತನಗೆ ಸಹಾಯಮಾಡುವಂತೆ ವಿಡಿಯೋದಲ್ಲಿ ಹೇಳಿದ್ದಾನೆ. ಘಟನೆ ತಿಳಿದ ಪೊಲಿಸರು ಸ್ಥಳಕ್ಕೆ ಧಾವಿಸಿ ಶಾಂತಕುಮಾರ್ ನನ್ನು ಮನವೊಲಿಸಿ ಕೆಳಗಿಳಿಸುವ ಯತ್ನ ನಡೆಸಿದ್ದಾರೆ.