ಸ್ಪೀಕರ್ ವಿರುದ್ಧವೇ ಅವಿಶ್ವಾಸ ನಿರ್ಣಯ ಮಂಡಿಸಲು ಬಿಜೆಪಿ ಪ್ಲಾನ್ ! ಬೆಂಗಳೂರು, ಜುಲೈ 07, 2019 (..):ಶಾಸಕರ ರಾಜೀನಾಮೆ ಪತ್ರವನ್ನು ಅಂಗೀಕರಿಸಲು ಮೀನಾಮೇಷ ಇಲ್ಲವೇ ವಿಳಂಬ ಧೋರಣೆ ಅನುಸರಿಸಿದರೆ ವಿಧಾನಸಭೆ ಸ್ಪೀಕರ್ ರಮೇಶ್‍ಕುಮಾರ್ ವಿರುದ್ಧವೇ ಅವಿಶ್ವಾಸ ನಿರ್ಣಯ ಮಂಡಿಸಲು ಪ್ರತಿಪಕ್ಷ ಬಿಜೆಪಿ ಸಜ್ಜಾಗಿದೆ. ಶುಕ್ರವಾರದಂದು ಅಧಿವೇಶನ ಆರಂಭವಾಗಲಿದ್ದು, ನಿನ್ನೆ ರಾಜೀನಾಮೆ ನೀಡಿರುವ 12 ಮಂದಿ ಹಾಗೂ ಕಳೆದ ಸೋಮವಾರ ಶಾಸಕ ಆನಂದ್ ಸಿಂಗ್ ರಾಜೀನಾಮೆ ನೀಡಿದ್ದರು. ಮಂಗಳವಾರ ಶಾಸಕರ ರಾಜೀನಾಮೆ ಪತ್ರವನ್ನು ಪರಿಶೀಲನೆ ಮಾಡುವುದಾಗಿ ಈಗಾಗಲೇ ರಮೇಶ್‍ಕುಮಾರ್ ಮಾಧ್ಯಮಗಳ ಮುಂದೆ ಬಹಿರಂಗಪಡಿಸಿದ್ದಾರೆ. ಒಂದು ವೇಳೆ ತಾಂತ್ರಿಕ ಕಾರಣ ಇಲ್ಲವೇ ಬೇರೊಂದು ಕಾರಣಕ್ಕಾಗಿ ರಾಜೀನಾಮೆಯನ್ನು ಅಂಗೀಕರಿಸಲು ವಿಳಂಬ ಮಾಡಿದರೆ ಅವರ ವಿರುದ್ಧವೇ ಅವಿಶ್ವಾಸ ನಿರ್ಣಯ ಮಂಡಿಸಲು ಚಿಂತನೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.