ಇನ್ನೇನು ನಿವೃತ್ತಿಗೆ ಎರಡು ಗಂಟೆ ಮಾತ್ರ ಬಾಕಿ ಎನ್ನುವಾಗ ಐದು ಎ ಎಸ್ ಐಗಳಿಗೆ ಪಿಎಸ್ ಐ ಆಗಿ ಪ್ರಮೋಷನ್ ಬೆಂಗಳೂರು: ಜುಲೈ-5:(..) ಬರೋಬ್ಬರಿ 30 ವರ್ಷಗಳ ಕಾಲ ಸಹಾಯಕ ಸಬ್ ಇನ್ಸ್‌ಪೆಕ್ಟರ್‌(ಎ ಎಸ್ ಐ) ಆಗಿ ಕಾರ್ಯನಿರ್ವಹಿಸಿ, ಇನ್ನೇನು ನಿವೃತ್ತಿಹೊಂದಲು ಕೇವಲ ಎರಡು ಗಂಟೆ ಮಾತ್ರ ಬಾಕಿ ಇದೆ ಎನ್ನುವಾಗ ಸಬ್‌ಇನ್ಸ್‌ಪೆಕ್ಟರ್‌ ಆಗಿ ಬಡ್ತಿ ಸಿಗುವ ಮೂಲಕ ಐವರು ಎ ಎಸ್ ಐ ಗಳ ಭಾಗ್ಯದ ಬಾಗಿಲು ತೆರೆದಂತಾಗಿದೆ. ಎಡಿಜಿಪಿ ಭಾಸ್ಕರ್ ರಾವ್ ಅವರ ಮುತುವರ್ಜಿಯಿಂದ ಎ ಎಸ್ ಐ ಗಳಾದ ಮಹದೇವ, ಕೆ.ಆರ್. ಪುರಶೋತ್ತಮ್, ವೆಂಕಟರಾಮಯ್ಯ, ಅಣ್ಣಯ್ಯ ಹಾಗೂ ಗಣೇಶ್ ಎಂಬುವರಿಗೆ ನಿವೃತ್ತಿಯ ಕೊನೆ ಗಳಿಗೆಯಲ್ಲಿ ಮುಂಬಡ್ತಿ ಸಿಕ್ಕಿದೆ. ಸುಪ್ರೀಂ ಕೋರ್ಟ್ ನಲ್ಲಿ ಮುಂಬಡ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ಸಿಬ್ಬಂದಿ ಕೋರ್ಟ್ ತೀರ್ಪಿಗಾಗಿ ಕಾಯುತ್ತಿದ್ದರು. ಇದೀಗ ಅರ್ಹ ಅಧಿಕಾರಿಗಳಿಗೆ ಬಡ್ತಿ ನೀಡಲಾಗಿದೆ. ಶೀಘ್ರವಾಗಿ ಕಡತ ವಿಲೇವಾರಿ ನಡೆಸಿ ನಿವೃತ್ತಿಗೆ ಕೇವಲ ಎರಡು ಗಂಟೆಗೂ ಮುನ್ನ ಕೆಎಸ್‌ಆರ್‌ಪಿ ಎಡಿಜಿಪಿ ಬಡ್ತಿ ನೀಡಿದ್ದಾರೆ. ನಿವೃತ್ತಿ ಬಳಿಕ ಸಿಗುವ ಅನುಕೂಲಗಳು ಆದರೂ ಸಿಗಬೇಕು ಎನ್ನುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಎಡಿಜಿಪಿ ಭಾಸ್ಕರ್ ರಾವ್ ತಿಳಿಸಿದ್ದಾರೆ.