ಮಗುವಿಗೆ ಶಾಲೆಯಲ್ಲಿ ಉಚಿತ ಸೀಟ್ ನೀಡುವುದಾಗಿ ಹೇಳಿ ಮಹಿಳೆ ಮೇಲೆ ಅತ್ಯಾಚಾರ: ಕನ್ನಡಸಿರಿ ಸಂಘಟನೆ ರಾಜ್ಯಾಧ್ಯಕ್ಷನ ಬಂಧನ ಬೆಂಗಳೂರು:ಜೂ-27:(..) ಆರ್​​ಟಿಇ ಅಡಿಯಲ್ಲಿ ಮಗುವಿಗೆ ಸೀಟು ಕೊಡುವುದಾಗಿ ಹೇಳಿ ಮಹಿಳೆಯ ಮೇಲೆ ಕನ್ನಡಸಿರಿ ಸಂಘಟನೆಯ ಅಧ್ಯಕ್ಷ ಅತ್ಯಾಚಾರ ನಡೆಸಿರುವ ಘಟನೆ ಬೆಂಗಳೂರಿನ ಹಾರೋಹಳ್ಳಿಯಲ್ಲಿ ನಡೆದಿದೆ. ಸಂಘಟನೆಯ ರಾಜ್ಯಾಧ್ಯಕ್ಷ ಆನಂದ್ ಅತ್ಯಾಚಾರ ಆರೋಪಿ. ಜೂನ್​​​ 16 ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಹಿಳೆಯ ಮಗುವಿಗೆ ಆರ್​​ಟಿಐ ಅಡಿಯಲ್ಲಿ ಶಾಲೆಯಲ್ಲಿ ಉಚಿತವಾಗಿ ಸೀಟ್​​​ ಕೊಡಿಸುವುದಾಗಿ ಮತ್ತು ಶಾಲಾ ಶುಲ್ಕ ಕಟ್ಟುವುದಾಗಿ ನಂಬಿಸಿ ಆರೋಪಿ ಈ ಕೃತ್ಯವೆಸಗಿದ್ದಾನೆ. ಜೂನ್​​​ 16 ರಂದು ಹಾರೋಹಳ್ಳಿಯಲ್ಲಿರುವ ತನ್ನ ಮನೆಗೆ ಮಹಿಳೆಯನ್ನು ಕರೆಸಿಕೊಂಡ ಆರೋಪಿ, ಅತ್ಯಾಚಾರವೆಸಗಿದ್ದಾನೆ. ಸಂತ್ರಸ್ತೆ ಜತೆಗಿನ ಖಾಸಗಿ ವೀಡಿಯೋವನ್ನು ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದು, ಅತ್ಯಾಚಾರದ ಬಗ್ಗೆ ಬೇರೆಯವರಿಗೆ ತಿಳಿಸಿದಲ್ಲಿ ವಿಡಿಯೋ ವೈರಲ್ ಮಾಡುವುದಾಗಿ ಹೆದರಿಸಿದ್ದಾನೆ. ಮಹಿಳೆಯನ್ನು ಬೆದರಿಸಿ ಮೂರು ಬಾರಿ ಅತ್ಯಾಚಾರ ಮಾಡಿರುವ ಆರೋಪಿ, ಈ ವಿಷಯದ ಬಗ್ಗೆ ಪೊಲೀಸರಿಗೆ ದೂರು ನೀಡಿದರೆ ಕೊಲೆ ಮಾಡುವುದಾಗಿಯೂ ಹೆದರಿಸಿದ್ದಾನೆ. ಈ ಘಟನೆಯಿಂದ ಮನನೊಂದ ಮಹಿಳೆ ಬ್ಯಾಡರಹಳ್ಳಿ ಪೊಲೀಸ್​​ ಠಾಣೆಯಲ್ಲಿ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಅಂತಿಮವಾಗಿ ಆರೋಪಿ ಆನಂದ್ ನನ್ನು ಬಂಧಿಸಿದ್ದಾರೆ. ಆರೋಪಿ ವಿರುದ್ಧ ಈ ಹಿಂದೆಯೂ ಹಲವು ಮಹಿಳೆಯರಿಗೆ ವಂಚಿಸಿದ ದೂರುಗಳು ದಾಖಲಾಗಿವೆ.