ನಾಲೆಗಳಿಗೆ ನೀರುಹರಿಸದ ಹಿನ್ನೆಲೆ: ಮಂಡ್ಯದಲ್ಲಿ ಸಚಿವ ಡಿಕೆ ಶಿವಕುಮಾರ್ ಕಾರು ತಡೆದು ರೈತರಿಂದ ಆಕ್ರೋಶ… ಮಂಡ್ಯ,ಜೂ,24,2019(..): ನಾಲೆಗಳಿಗೆ ನೀರು ಹರಿಸದ ಹಿನ್ನೆಲೆ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಅವರ ಕಾರು ತಡೆದು ರೈತರು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಸಚಿವ ಡಿ.ಕೆ ಶಿವಕುಮಾರ್ ಅವರ ಕಾರನ್ನ ತಡೆದು ರೈತರು ತರಾಟೆ ತೆಗೆದುಕೊಂಡಿದ್ದಾರೆ. ಕೆಆರ್​ಎಸ್​ನಿಂದ ನೀರು ಬಿಡಲು ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರು. ಚುನಾವಣೆಗೂ ಮುನ್ನ ಪ್ರಾಧಿಕಾರದ ಅನುಮತಿಗೂ ಪಡೆಯದೆ, ಅದನ್ನು ಲೆಕ್ಕಿಸದೆ ನೀರು ಬಿಟ್ಟಿದ್ದೀರಿ. ಆದರೇ ಈಗ ನೀರು ಬಿಡಿ ಎಂದರೆ ಪ್ರಾಧಿಕಾರದತ್ತ ಬೊಟ್ಟು ಮಾಡುತ್ತೀರಿ ಎಂದು ಸಚಿವ ಡಿಕೆ ಶಿವಕುಮಾರ್ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಮೂರು ನಾಲ್ಕು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರೈತರು ಕಿಡಿಕಾರಿದರು. ಇನ್ನು ಇದೇ ವೇಳೆ ಡಿ.ಕೆ.ಶಿವಕುಮಾರ್​, ಪ್ರತಿಭಟನೆ ವಿಚಾರವೇ ಗೊತ್ತಿಲ್ಲ. ಗೊತ್ತಿದ್ದರೆ ನಾನೇ ರೈತರ ಬಳಿ ಮಾತನಾಡುತ್ತಿದ್ದೆ. ಸಮಸ್ಯೆ ಬಗ್ಗೆ ಗಮನಹರಿಸುತ್ತೇನೆ ಎಂದು ಭರವಸೆ ನೀಡಿದರು. : - - –-